ಬೆಂಗಳೂರು: ‘ಕಾಡನ್ನು ಉಳಿಸಲು ಎಲ್ಲರೂ ಪಣ ತೊಡಬೇಕು’ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಕರೆ ನೀಡಿದರು.
ಅರಣ್ಯ ಅಭಿವೃದ್ದಿ ನಿಗಮದ ಸುವರ್ಣ ಮಹೋತ್ಸವದ ಅಂಗವಾಗಿ ಬುಧವಾರ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಆಮ್ಲಜನಕದ ಕೊರತೆಯಿಂದ ಬಹಳಷ್ಟು ಸಮಸ್ಯೆಯನ್ನು ಅನುಭವಿಸಿದ್ದೇವೆ. ಆಮ್ಲಜನಕವನ್ನು ಸಮೃದ್ಧವಾಗಿ ನೀಡುವಂತಹ ಪರಿಸರ ಮತ್ತು ಕಾಡನ್ನು ಬೆಳೆಸುವಂತಹ ಕಾರ್ಯಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾದ ಅವಶ್ಯಕತೆಅರಿತುಕೊಂಡಿದ್ದೇವೆ’ ಎಂದರು.
‘ಕಾಡನ್ನು ಬೆಳೆಸಿ, ಪರಿಸರ ರಕ್ಷಿಸಲು ನಾವೆಲ್ಲರೂ ಪಣ ತೊಡಬೇಕಾಗಿದೆ. ಅರಣ್ಯ ಅಭಿವೃದ್ಧಿ ನಿಗಮ ಕಳೆದ 50 ವರ್ಷಗಳಿಂದ ರಾಜ್ಯದಲ್ಲಿ ಕಾಡು ಉಳಿಸುವಲ್ಲಿ ತನ್ನದೇ ಆದ ಕೊಡುಗೆ ಯನ್ನು ನೀಡಿದೆ’ ಎಂದರು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ ಆರ್.ಕೆ.ಸಿಂಗ್ ಮಾತನಾಡಿ, ಪರಿಸರ ಜಾಗೃತಿ ಮಾಸಾಚರಣೆ ಅಂಗ ವಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದರು.
ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ನಿಗಮದ ಉಪಾಧ್ಯಕ್ಷ ರೇವಣ್ಣಪ್ಪ, ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರಾಧಾದೇವಿ ಹಾಜರಿದ್ದರು.