ಬೆಂಗಳೂರು: ‘ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ರೈತರನ್ನು ಉಗ್ರರಂತೆ ಬಿಂಬಿಸಿ ಸುಳ್ಳು ಎಫ್ಐಆರ್ ದಾಖಲಿಸಲಾಗಿದೆ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
‘ರೈತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದು, ಇದರಲ್ಲಿ ಕೇಂದ್ರ ಸರ್ಕಾರದ ಕೈವಾಡದ ಶಂಕೆ ಇದೆ. ನಿಯೋಜಿತ ಮಾರ್ಗವನ್ನು ಬದಲಿದ ರೈತರನ್ನು ಕೆಂಪು ಕೋಟೆಯ ಕಡೆಗೆ ನುಗ್ಗಲು ಬಿಟ್ಟಿದ್ದೇಕೆ’ ಎಂದು ದಸಂಸ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಪ್ರಶ್ನಿಸಿದ್ದಾರೆ.
‘ಸಾವಿರಾರು ಸಂಖ್ಯೆಯಲ್ಲಿ ಪೊಲೀಸರಿದ್ದರೂ ಸಮಾಜ ಘಾತುಕ ಶಕ್ತಿಗಳು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಲು ಅವಕಾಶ ನೀಡಿದ್ದು ಸರ್ಕಾರದ ವೈಫಲ್ಯ. ಧ್ವಜ ಹಾರಿಸಿದವರು ಬೇರೆ ಸಂಘಟನೆಯವರು ಎಂದು ಬಹಿರಂಗವಾಗಿ ಹೇಳಿದರೂ ಅವರನ್ನು ಬಂಧಿಸದೆ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಕೇಂದ್ರ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.