ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದ ವಿಜಯನಗರದ ಅಮರಜ್ಯೋತಿನಗರ ಶಾಖೆಗೆ ಗ್ರಾಹಕರೊಬ್ಬರು ನೀಡಿದ್ದ ನೋಟುಗಳಲ್ಲಿ ₹ 500 ಮುಖಬೆಲೆಯ 6 ನಕಲಿ ನೋಟುಗಳು ಪತ್ತೆಯಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಬ್ಯಾಂಕ್ ವ್ಯವಸ್ಥಾಪಕಿಪಲ್ಲವಿ ಶ್ರೀವತ್ಸ ದೂರು ನೀಡಿದ್ದಾರೆ. ಗ್ರಾಹಕನಾಗರಬಾವಿಯ ಲೋಕೇಶ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಇದೇ 9ರಂದು ಬ್ಯಾಂಕ್ಗೆ ಬಂದಿದ್ದ ಲೋಕೇಶ್, ತಮ್ಮ ಖಾತೆಗೆ ಜಮೆ ಮಾಡುವಂತೆ₹500 ಮುಖಬೆಲೆಯ 78 ನೋಟುಗಳನ್ನು (₹ 39,000) ಕೌಂಟರ್ಗೆ ಕೊಟ್ಟಿದ್ದರು. ಯಂತ್ರದಲ್ಲಿ ಪರಿಶೀಲಿಸಿದಾಗ ₹ 500 ಮುಖಬೆಲೆಯ 6 ನೋಟುಗಳು ನಕಲಿ ಎಂಬುದು ಗೊತ್ತಾಗಿತ್ತು. ಬಳಿಕವೇ ವ್ಯವಸ್ಥಾಪಕಿ ದೂರು ನೀಡಿದ್ದಾರೆ.’
‘ಲೋಕೇಶ್ ಅವರು ನೋಟುಗಳನ್ನು ಎಲ್ಲಿಂದ ತಂದಿದ್ದರು ಎಂದು ತಿಳಿದುಕೊಳ್ಳಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.
ಬಾಲಕಿ ರಕ್ಷಣೆ; ದಂಪತಿ ವಶಕ್ಕೆ
ಬೆಂಗಳೂರು: ಬಾಣಸವಾಡಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕೆಲಸಕ್ಕೆ ನೇಮಿಸಿಕೊಂಡಿದ್ದ 14 ವರ್ಷದ ಬಾಲಕಿಯನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
‘ಸ್ಥಳೀಯ ನಿವಾಸಿ ಮಹಮ್ಮದ್ ಅರ್ಷಾದ್ ಹಾಗೂ ಶಾಮಿನಾ ಬೇಗಂ ಎಂಬುವರು ಎರಡು ವರ್ಷದಿಂದ ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಈ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು. ‘ಮನೆಗೆ ಹೋಗಿ ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಜೊತೆಗೆ, ಮಹಮ್ಮದ್ ಅರ್ಷಾದ್ ಹಾಗೂ ಶಾಮಿನಾ ಬೇಗಂ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿದೆ’ ಎಂದರು.
ಸ್ನಾನದ ವೇಳೆ ಪ್ರಜ್ಞೆ ತಪ್ಪಿ ಬಿದ್ದು ಸಾವು
ಬೆಂಗಳೂರು: ಸ್ನಾನ ಮಾಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದ ತುಬಾ ತಜೀಮಾ (31) ಎಂಬುವರು ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
‘ಬನ್ನೇರುಘಟ್ಟದ ಅರೆಕೆರೆ ನಿವಾಸಿ ಆಗಿದ್ದ ತುಬಾ, ತಂದೆಯ ಹುಟ್ಟುಹಬ್ಬ ಆಚರಣೆಗಾಗಿ ಬೇಗೂರಿನ ಎಸ್ಬಿಐ ಲೇಔಟ್ನಲ್ಲಿರುವ ಸಹೋದರ ಮುಕ್ತಾರ್ ಅಹಮ್ಮದ್ ಮನೆಗೆ ಬಂದಿದ್ದಾಗಲೇ ಈ ಘಟನೆ ನಡೆದಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.