ಬೀದಿನಾಯಿ ಕೊಲ್ಲಲು ಯತ್ನ: ನಿವೃತ್ತ ಪಿಎಸ್ಐ ವಿರುದ್ಧ ಎಫ್ಐಆರ್

ಬೆಂಗಳೂರು: ನಾಯಿಯೊಂದರ ಮೇಲೆ ಕಾರಿನ ಚಕ್ರ ಹತ್ತಿಸಿ ಕೊಲ್ಲಲು ಯತ್ನಿಸಿದ ಆರೋಪದಡಿ ನಿವೃತ್ತ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನಾಗೇಶ್ ಎಂಬುವರ ವಿರುದ್ಧ ಹುಳಿಮಾವು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಘಟನೆ ಬಗ್ಗೆ ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ಪಶು ವೈದ್ಯ ರಮೇಶ್ ಎಂಬುವರು ದೂರು ನೀಡಿ ದ್ದಾರೆ. ಹುಳಿಮಾವು ಬಳಿಯ ದೊಡ್ಡಕಮ್ಮನಹಳ್ಳಿ ನಿವಾಸಿ ಆಗಿರುವ ನಾಗೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನಾಗೇಶ್ ಅವರು ಭಾನುವಾರ ಮಧ್ಯಾಹ್ನ ಮನೆ ಸಮೀಪ ಕಾರಿನಲ್ಲಿ ಹೊರಟಿದ್ದರು. ರಸ್ತೆಯಲ್ಲಿ ಬೀದಿನಾಯಿಯೊಂದು ಮಲಗಿತ್ತು. ಹಾರ್ನ್ ಮಾಡಿದರೂ ಅದು ಎದ್ದು ಹೋಗಿರಲಿಲ್ಲ. ಅದೇ ವೇಳೆಯೇ ನಾಗೇಶ್, ನಾಯಿ ಮೇಲೆಯೇ ಕಾರು ಚಲಾಯಿಸಿ
ದ್ದರು. ತೀವ್ರ ಗಾಯಗೊಂಡ ನಾಯಿ, ರಸ್ತೆಯಲ್ಲೇ ನರಳುತ್ತ ಬಿದ್ದಿತ್ತು. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.’ ಎಂದೂ ತಿಳಿಸಿದರು.
‘ನಾಗೇಶ್ ಅವರಿಗೆ ನೋಟಿಸ್ ನೀಡಲಾಗಿದೆ. ಅವರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೊಲೀಸರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.