ಬೆಂಗಳೂರು: ನೆರೆಯ ಹಾವಳಿ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠವುಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿಯ ಗೋಸ್ವರ್ಗದಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಆರಂಭಿಸಿದೆ.
ನಗರದಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದ ರಾಘವೇಶ್ವರಭಾರತೀ ಸ್ವಾಮೀಜಿ ಈ ವಿಚಾರ ಪ್ರಕಟಿಸಿದರು.
‘ರಾಜ್ಯದ ಜನ ಭೀಕರ ಪ್ರವಾಹದಿಂದ ತತ್ತರಿಸಿದ್ದು, ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಕ್ಕೆ ಧುಮುಕಬೇಕಾಗಿದೆ. ನೊಂದವರ ಬದುಕನ್ನು ಕಟ್ಟಿಕೊಡಲು ನಮ್ಮ ಸಂಪಾದನೆಯ ಒಂದಿಷ್ಟು ಹಣವನ್ನು ಸಮರ್ಪಿಸಬೇಕು’ ಎಂದು ಅವರು ಹೇಳಿದರು.
‘ಗೋಸ್ವರ್ಗದಲ್ಲಿ ಸಾವಿರಾರು ಮಂದಿಗೆ ಆಶ್ರಯ ನೀಡಲು ಮತ್ತು ಊಟೋ ಪಚಾರಕ್ಕೆ ವ್ಯವಸ್ಥೆಯಿದೆ. ಪ್ರವಾಹ ಸಂತ್ರಸ್ತರು ಉಚಿತವಾಗಿ ಇದನ್ನು ಬಳಸಿಕೊಳ್ಳಬಹುದು. ಗೋಸ್ವರ್ಗ ನೆರೆ ಸಂತ್ರಸ್ತರ ಪಾಲಿಗೂ ಸ್ವರ್ಗವಾಗಬೇಕು’ ಎಂದರು.
ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ಸಂಗ್ರಹಕ್ಕೆ ಮಠ ವಿವಿಧ ಕಡೆ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರಗಳನ್ನು ತೆರೆದಿದೆ.