ಬೆಂಗಳೂರು: ‘ಕಣ್ವ ಸಮೂಹ ಸಂಸ್ಥೆಯವರು ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ, ಠೇವಣಿದಾರರ ₹650 ಕೋಟಿ ಲೂಟಿ ಮಾಡಿ ತಲೆ ಮರೆಸಿಕೊಂಡಿದ್ದು, ನ್ಯಾಯ ದೊರಕಿಸಿಕೊಡಬೇಕು’ ಎಂದು ಶ್ರೀ ಕಣ್ವ ಸೌಹಾರ್ದ ಠೇವಣಿದಾರರ ಕಲ್ಯಾಣ ಸಂಘದ ಅಧ್ಯಕ್ಷ ನಾರಾಯಣ ಗೌಡ ಆಗ್ರಹಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಠೇವಣಿದಾರರು ವಂಚನೆ ಸಂಬಂಧ ಹಲವು ಠಾಣೆಗಳಲ್ಲಿ ದೂರು ನೀಡಿದರೂ ನ್ಯಾಯ ಸಿಗಲಿಲ್ಲ. ಹಣ ಕಳೆದುಕೊಂಡವರ ಜೀವನ ದುಸ್ತರವಾಗಿದೆ. ಈ ಹಗರಣ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದರು.
‘ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ವ್ಯವಸ್ಥಾಪಕರು, ಏಜೆಂಟರು ಮತ್ತು ಸಿಬ್ಬಂದಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಠೇವಣಿದಾರರಿಗೆ ನ್ಯಾಯ ನೀಡಬೇಕು’ ಎಂದು ಮನವಿ ಮಾಡಿದರು.