ಬೆಂಗಳೂರು: ‘ಟೆಲಿಗ್ರಾಂ’ ಆ್ಯಪ್ ಮೂಲಕ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡಲಾಗಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಗರದ ನಿವಾಸಿಯಾಗಿರುವ 27 ವರ್ಷದ ಉದ್ಯಮಿಯೊಬ್ಬರು ಹನಿಟ್ರ್ಯಾಪ್ ಜಾಲದ ಬಗ್ಗೆ ದೂರು ನೀಡಿದ್ದಾರೆ. ಮಹಿಳೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ಉದ್ಯಮಿ ಟೆಲಿಗ್ರಾಂ ಆ್ಯಪ್ ಬಳಸುತ್ತಿದ್ದಾರೆ. ಅವರಿಗೆ ಮೆಹರಾ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದ ಮಹಿಳೆ, ಸಲುಗೆಯಿಂದ ಮಾತನಾಡಿದ್ದರು. ನಂತರ ಇಬ್ಬರೂ ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ವಾಟ್ಸ್ಆ್ಯಪ್ ಮೂಲಕವೂ ಚಾಟಿಂಗ್ ಹಾಗೂ ವಿಡಿಯೊ ಕರೆ ಮಾಡಲಾರಂಭಿಸಿದ್ದರು’ ಎಂದು ತಿಳಿಸಿದರು.
‘ತಮ್ಮ ಪತಿ ದುಬೈನಲ್ಲಿರುವುದಾಗಿ ಹೇಳಿದ್ದ ಮಹಿಳೆ, ‘ನನಗೆ ಸಂಗಾತಿ ಬೇಕಾಗಿದೆ. ನೀವು ಇಷ್ಟವಾಗಿದ್ದೀರಾ. ಮನೆಗೆ ಬನ್ನಿ...’ ಎಂದು ಆಹ್ವಾನಿಸಿದ್ದರು. ಅದನ್ನು ನಂಬಿದ್ದ ದೂರುದಾರ, ಮಹಿಳೆ ತಿಳಿಸಿದ್ದ ಜೆ.ಪಿ.ನಗರ 5ನೇ ಹಂತದಲ್ಲಿರುವ ಮನೆಗೆ ಮಾರ್ಚ್ 3ರಂದು
ಹೋಗಿದ್ದರು.’
‘ಉದ್ಯಮಿಯನ್ನು ಬರಮಾಡಿಕೊಂಡಿದ್ದ ಮಹಿಳೆ, ಮಲಗುವ ಕೊಠಡಿಗೆ ಕರೆದೊಯ್ದಿದ್ದರು. ಬಟ್ಟೆ ಬಿಚ್ಚಿಸಿದ್ದರು. ಅದೇ ಸಮಯಕ್ಕೆ ಕೊಠಡಿಯೊಳಗೆ ನುಗ್ಗಿದ್ದ ಮೂವರು ಆರೋಪಿಗಳು, ‘ನೀನು ಯಾರು. ಇಲ್ಲಿಗೆ ಏಕೆ ಬಂದಿದ್ದಿಯಾ? ನಿನ್ನ ವಿಡಿಯೊ ಮಾಡಿದ್ದೇವೆ. ಮೆಹರಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಿಯಾ. ಈ ಸಂಗತಿಯನ್ನು ಎಲ್ಲರಿಗೂ ತಿಳಿಸುತ್ತೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಅಪ್ಲೋಡ್ ಮಾಡುತ್ತೇವೆ’ ಎಂಬುದಾಗಿ ಬೆದರಿಸಿ ಹಲ್ಲೆ ಮಾಡಿದ್ದರು. ವಿಷಯ ಮುಚ್ಚಿಡಲು ₹ 3 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು’ ಎಂದು ಪೊಲೀಸರು ಹೇಳಿದರು.
ಫೋನ್ ಪೇ ಮೂಲಕ ವರ್ಗಾವಣೆ: ‘ತಮ್ಮ ಬಳಿ ಹಣವಿಲ್ಲವೆಂದು ಉದ್ಯಮಿ ಹೇಳಿದ್ದರು. ಮೊಬೈಲ್ ಕಸಿದುಕೊಂಡಿದ್ದ ಆರೋಪಿಗಳು, ಫೋನ್ ಪೇ ಮೂಲಕ ಹಂತ ಹಂತವಾಗಿ ₹ 21,500 ವರ್ಗಾವಣೆ ಮಾಡಿಕೊಂಡಿದ್ದರು. ಪುನಃ 2.50 ಲಕ್ಷ ನೀಡುವಂತೆ ಒತ್ತಾಯಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
‘ತಮ್ಮ ಮನೆಗೆ ಕರೆದೊಯ್ದರೆ ಹಣ ನೀಡುವುದಾಗಿ ಉದ್ಯಮಿ ಹೇಳಿದ್ದರು. ಅದಕ್ಕೆ ಒಪ್ಪಿದ್ದ ಆರೋಪಿಗಳು, ಮಹಿಳೆ ಮನೆಯಿಂದ ಉದ್ಯಮಿಯನ್ನು ಹೊರಗಡೆ ಕರೆತಂದಿದ್ದರು. ಆಗಲೇ ಉದ್ಯಮಿ ತಪ್ಪಿಸಿಕೊಂಡು ಬಂದು ಠಾಣೆಗೆ ದೂರು ನೀಡಿದ್ದಾರೆ. ಕೃತ್ಯ ನಡೆದ ಬಳಿಕ ಮಹಿಳೆ ಮನೆಯಲ್ಲಿ ಯಾರು ಇಲ್ಲ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.