ಬೆಂಗಳೂರು: ಮೆಟ್ರೋ ಕಾಮಗಾರಿಯಲ್ಲಿ ಡ್ರಿಲ್ಲಿಂಗ್ ಮಾಡುವ ವೇಳೆ ಗರುಡಾಚಾರ್ಯ ಪಾಳ್ಯದ ಬಳಿ ಗೇಯ್ಲ್ ಗ್ಯಾಸ್ ಪೈಪ್ ಸೋರಿಕೆಯಾಗಿ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಅವಘಡದಿಂದ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಸ್ಥಳಕ್ಕೆ ಗೇಯ್ಲ್ ತಂಡ ಹಾಗೂ ಅಗ್ನಿಶಾಮಕ ದಳ, ಮೆಟ್ರೋ ಅಧಿಕಾರಿಗಳು ಆಗಮಿಸಿದ್ದು, ಕಾರ್ಯಚರಣೆ ಮುಂದುವರೆದಿದೆ. ಹಾಗಾಗಿ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ ಕಾರಣ ಐಟಿಪಿಎಲ್ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಾರ್ಗ ಬದಲಾವಣೆ:ವಾಹನಗಳು ದೇವಸಂದ್ರ ಮಾರ್ಗವಾಗಿ ಚಲಿಸಬಹುದು ಅಥವಾ ಮಾರತ್ತಹಳ್ಳಿ ಮತ್ತು ವೈಟ್ ಫೀಲ್ಡ್ ತಲುಪಲು ಔಟರ್ ರಿಂಗ್ ರೋಡ್ ಬಳಸಬಹುದು.
ಇನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇವಸಂದ್ರ ರಸ್ತೆ ಅಥವಾ ಗ್ರಾಫೈಟ್– ಕುಂದಲಹಳ್ಳಿ–ಮಾರತಹಳ್ಳಿ–ಔಟರ್ ರಿಂಗ್ ರೋಡ್ ಮೂಲಕ ಹೋಗಬಹುದು
ಇದು ಮೊದಲಲ್ಲ:ಈ ಹಿಂದೆ ಅ.22 ರಂದು ಮಹಾದೇವಪುರದಲ್ಲಿ ಇದೇ ರೀತಿ ಅವಘಡ ಸಂಭವಿಸಿದ್ದು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.