ಬೆಂಗಳೂರು: ರಸ್ತೆ ಪಕ್ಕದಲ್ಲಿ ಕಸ ಬಿಸಾಕಿದ್ದನ್ನು ಪ್ರಶ್ನಿಸುವ ಜೊತೆಗೆ ದಂಡ ಪಾವತಿಸುವಂತೆ ಕೇಳಿದ್ದಕ್ಕೆ ಸಾರ್ವಜನಿಕರು ಬಿಬಿಎಂಪಿ ಆರೋಗ್ಯ ಅಧಿಕಾರಿ, ಮಾರ್ಷಲ್ ಮತ್ತು ಸಿಬ್ಬಂದಿಯನ್ನು ನಿಂದಿಸಿದ್ದಾರೆ.
ವಾರ್ಡ್ ನಂ. 45ರಲ್ಲಿ ಹರಿಶ್ಚಂದ್ರಘಾಟ್ ಬಳಿ ಮಹಾಕವಿ ಕಾಳಿದಾಸ ರಸ್ತೆ ಬಳಿ ಮಾರ್ಷಲ್ ಆಗಿ ಕೆಲಸ ಮಾಡುತ್ತಿರುವ ಬಸವರಾಜ್ ಸೆ. 29ರಂದು ರಾತ್ರಿ 9.45ರಲ್ಲಿ ರಸ್ತೆ ಪಕ್ಕದಲ್ಲಿ ಸ್ಥಳೀಯರು ಕಸ ಎಸೆಯುತ್ತಿರುವುದನ್ನು ಪ್ರಶ್ನಿಸಿದ್ದರು.
ಇದರಿಂದ ಕೆರಳಿದ ಆ ವ್ಯಕ್ತಿ, ಬಸವರಾಜ್ ಮೇಲೆ ಹಲ್ಲೆ ಮಾಡಿದ್ದರು. ಅಧಿಕಾರಿ ಈ ಸಂಬಂಧ ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದವರಿಗೆ ದಂಡಹಾಕಲು ಮುಂದಾದ ಜೆಸಿ ನಗರ ಉಪ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಕಿ ಅನೀಶಾ ಫಾತಿಮಾ (34) ಅವರನ್ನು ರಹಮತ್ ನಗರದ ವ್ಯಕ್ತಿಯೊಬ್ಬರು ನಿಂದಿಸಿದ್ದಾರೆ.
ಅಲ್ಲದೆ, ನಂತರ ಅಲ್ಲಿಗೆ ಬಂದ 10ರಿಂದ 15 ಜನರಿದ್ದ ಗುಂಪು, ಫಾತಿಮಾ ಅವರನ್ನು ಅವಾಚ್ಯವಾಗಿ ನಿಂದಿಸಿದ ಬಗ್ಗೆ ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.