ಪೀಣ್ಯ ದಾಸರಹಳ್ಳಿ: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕ್ಲಾತಿಂ ಗಾರ್ಮೆಂಟ್ಸ್ ಕಂಪನಿಯ ವಿರುದ್ಧ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.
‘ಹತ್ತು ವರ್ಷದಿಂದ ಕೆಲಸ ಮಾಡಿದ್ದೇವೆ. ಕೆಲಸಕ್ಕೆ ರಾಜೀನಾಮೆ ನೀಡಿದ್ದೇವೆ. ನಮಗೆ ಬರಬೇಕಾದ ಭವಿಷ್ಯ ನಿಧಿ ಮತ್ತಿತರ ಹಣವನ್ನು ಕಂಪನಿಯವರು ನೀಡುತ್ತಿಲ್ಲ’ ಎಂದು ಪ್ರತಿಭಟನಾನಿರತ ಮಹಿಳೆ ಗೀತಾಬಾಯಿ ದೂರಿದರು.
'ಗರ್ಭಿಣಿಯಾಗಿದ್ದಾಗ ಕೆಲಸ ಬಿಟ್ಟಿದ್ದೆ. ಮತ್ತೆ ಆರು ತಿಂಗಳ ಮಗುವಿನೊಂದಿಗೆ ಬಂದಾಗ ಒಳಗೆ ಬಿಡದೆ ಗೇಟ್ ಹತ್ತಿರವೇ ಮಾತನಾಡಿಸಿ ಕಳಿಸಿದರು. ಕೆಲಸ ಬಿಟ್ಟು ಎರಡು ವರ್ಷವಾದರೂ ಬರಬೇಕಾದ ಹಣ ಬಂದಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.
ಮತ್ತೊಬ್ಬ ಉದ್ಯೋಗಿ ಹೇಮಲತಾ, 'ನಾಲ್ಕು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಈವರೆಗೂ ಪಿಎಫ್ ಹಣ ನೀಡುತ್ತಿಲ್ಲ’ ಎಂದು ದೂರಿದರು.
‘ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ 20 ದಿನದೊಳಗೆ ಸಮಸ್ಯೆ ಪರಿಹರಿಸಲಾಗುವುದು. ಪಿಎಫ್ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು’ ಎಂದು ಗಾರ್ಮೆಂಟ್ಸ್ನ ವ್ಯವಸ್ಥಾಪಕಿ ಪ್ರಿಯಾ ವೆಂಕಟೇಶ್ ಹೇಳಿದರು.