ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಆರೋಪಿಗಳ ವಿಚಾರಣೆಯನ್ನು ಬೆಂಗಳೂರು ನಗರ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಇದೇ ಜುಲೈ 4ರಿಂದ 8ರವರೆಗೆ ನಿತ್ಯವೂ ನಡೆಸಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಸಾಕ್ಷಿಯಾಗಿರುವ ಕವಿತಾ ಲಂಕೇಶ್ ಅವರ ಸಾಕ್ಷ್ಯವನ್ನು ಶುಕ್ರವಾರ ದಾಖಲಿಸಿಕೊಂಡ ಬಳಿಕ ನ್ಯಾಯಾಧೀಶ ಚಂದ್ರಶೇಖರ ಮೃತ್ಯುಂಜಯ ಜೋಶಿ ಈ ಕುರಿತಂತೆ ಆದೇಶಿಸಿದರು.
ವಿಚಾರಣೆ ವೇಳೆ 18 ಆರೋಪಿಗಳ ಪೈಕಿ 11 ಮಂದಿಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಉಳಿದ ಏಳು ಮಂದಿ ಗೈರು ಹಾಜರಾಗಿದ್ದರು.
ಗೈರಾಗಿದ್ದ ಏಳೂ ಜನರು ಮಹಾರಾಷ್ಟ್ರದ ವಿಚಾರವಾದಿ ನರೇಂದ್ರದಾಬೋಲ್ಕರ್ ಮತ್ತು ಎಡಪಂಥೀಯ ಚಿಂತಕ ಗೋವಿಂದ ಪಾನ್ಸರೆ ಕೊಲೆ ಪ್ರಕರಣದಲ್ಲೂ ಆರೋಪಿಗಳಾಗಿದ್ದಾರೆ. ಇವರೆಲ್ಲರನ್ನೂ ಮುಂಬೈನ ಆರ್ಥರ್ ಜೈಲಿನಲ್ಲಿ ಇರಿಸಿರುವ ಕಾರಣ ವಿಚಾರಣೆಗೆ ಹಾಜರಾಗಿರಲಿಲ್ಲ.
ಮುಂದಿನ ವಿಚಾರಣೆಯನ್ನು ಜುಲೈ 4ಕ್ಕೆ ನಿಗದಿಪಡಿಸಲಾಗಿದೆ.ಹತ್ಯೆ ನಡೆದ ನಾಲ್ಕು ವರ್ಷಗಳ ನಂತರ ವಿಚಾರಣೆಗೆ ವೇಗ ದೊರೆತಂತಾಗಿದೆ.