ನವದೆಹಲಿ: ‘ಗ್ಯಾಂಗ್ಸ್ಟರ್ ರವಿಪೂಜಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬನಿಂದ ಗುಜರಾತ್ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ನನಗೆ ಜೀವ ಬೆದರಿಕೆ ಇದೆ’ ಎಂದು ಜೆಎನ್ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರು ದೆಹಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಪೊಲೀಸ್ ರಕ್ಷಣೆ ನೀಡುವಂತೆಯೂ ಮನವಿ ಮಾಡಿದ್ದಾರೆ.
‘ರವಿಪೂಜಾರಿ ಬೆದರಿಕೆ ಒಡ್ಡಿರುವ ಕುರಿತು ದೆಹಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದೇನೆ. ಆತ ತಿಳಿಸಿದಂತೆ ನಾನು ಹಿಟ್ಲಿಸ್ಟ್ನಲ್ಲಿದ್ದೇನೆ. ಇದೇ ವ್ಯಕ್ತಿ 2016ರ ಫೆಬ್ರುವರಿಯಲ್ಲೂ ನನಗೆ ಇದೇ ರೀತಿ ಬೆದರಿಕೆ ಒಡ್ಡಿದ್ದ’ ಎಂದು ಟ್ವಿಟರ್ನಲ್ಲಿ ಖಾಲಿದ್ ಬರೆದುಕೊಂಡಿದ್ದಾರೆ.
‘ಎರಡು ಮೂರು ದಿನಗಳಿಂದ ಮೇವಾನಿ ಅವರಿಗೆ ದೂರವಾಣಿ ಮೂಲಕ ಜೀವಬೆದರಿಕೆ ಒಡ್ಡಲಾಗಿದೆ. ಈ ಪೈಕಿ ಒಂದು ಕರೆಯಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ. ಭಾಷಣ ಮಾಡುವುದನ್ನು ನಿಲ್ಲಿಸದಿದ್ದರೆ, ನನ್ನನ್ನು ಕೊಲ್ಲುವುದಾಗಿ ಕರೆಮಾಡಿದ ವ್ಯಕ್ತಿ ಬೆದರಿಸಿದ್ದಾನೆ’ ಎಂದು ದೂರಿನಲ್ಲಿ ಖಾಲಿದ್ ವಿವರಿಸಿದ್ದಾರೆ.