ಬೆಂಗಳೂರು: ರಾಮಮೂರ್ತಿನಗರದ ಕೌದೇನಹಳ್ಳಿಯಲ್ಲಿ ತಲೆ ಮೇಲೆ ಮರದ ಕೊಂಬೆ ಬಿದ್ದು ಎಂಟು ವರ್ಷದ ಬಾಲಕಿ ತ್ರಿಶಾ ಎಂಬಾಕೆ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ಸೆಗೆ ದಾಖಲಿಸಲಾಗಿದೆ.
ಬಾಲಕಿ ತ್ರಿಶಾ, ಅಕ್ಷಯ ನಗರದ ನಿವಾಸಿ ರಾಜು ಎಂಬುವರ ಪುತ್ರಿ. ತಂದೆ ಜೊತೆ ಬುಧವಾರ ಬೈಕ್ನಲ್ಲಿ ಹೊರಟಿ ದ್ದರು. ರಸ್ತೆಯಲ್ಲಿ ಉಬ್ಬು ಇದ್ದಿದ್ದರಿಂದ ರಾಜು ಅವರು ನಿಧಾನವಾಗಿ ಬೈಕ್ ಓಡಿಸಿದ್ದರು. ಅದೇ ಸಂದರ್ಭದಲ್ಲಿ ಮರದ ಕೊಂಬೆ ಬಾಲಕಿಯ ತಲೆ ಮೇಲೆ ಬಿದ್ದಿತ್ತು.
ರಸ್ತೆಯಲ್ಲೇ ಕುಸಿದು ಬಿದ್ದ ಬಾಲಕಿಯನ್ನು ತಂದೆ ಹಾಗೂ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆಕೆ ಸ್ಥಿತಿ ಚಿಂತಾಜನಕವಾಗಿದೆ.
ಘಟನಾ ಸ್ಥಳದಲ್ಲಿ ಸೇರಿದ್ದ ಸ್ಥಳೀಯರು, ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಒಣಗಿದ ಮರಗಳ ಕೊಂಬೆಗಳನ್ನು ಕತ್ತರಿಸಲು ಹಲವು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಬಾಲಕಿ ಆಸ್ಪತ್ರೆ ಸೇರುವಂತಾಗಿದೆ’ ಎಂದು ಸ್ಥಳೀಯರು ದೂರಿದರು.
ಮೇಯರ್ ಭೇಟಿ: ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿದ್ದ ಮೇಯರ್ ಎಂ. ಗೌತಮ್ ಕುಮಾರ್ ಹಾಗೂ ಆಯುಕ್ತ ಬಿ.ಎಚ್. ಅನಿಲ್ಕುಮಾರ್, ಬಾಲಕಿ ತ್ರಿಶಾ ಆರೋಗ್ಯ ವಿಚಾರಿಸಿದರು.
ಬಳಿಕ ಮಾತನಾಡಿದ ಗೌತಮ್ ಕುಮಾರ್, ‘ಬಾಲಕಿಯ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿಯಿಂದಲೇ ಭರಿಸಲಾಗುವುದು’ ಎಂದರು.
‘ನಗರದಲ್ಲಿ ಅಪಾಯ ಸ್ಥಿತಿಯಲ್ಲಿರುವ ಹಾಗೂ ಒಣಗಿದ ಮರದ ಕೊಂಬೆಗಳನ್ನು ತೆರವುಗೊಳಿಸುವ ಬಗ್ಗೆ ಸದ್ಯದಲ್ಲೇ ಅರಣ್ಯ ವಿಭಾಗದ ಅಧಿಕಾರಿಗಳ ಸಭೆ ನಡೆಸಲಾಗುವುದು. ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು. ಎಲ್ಲಿಯಾದರೂ ಅಪಾಯಕಾರಿ ಮರಗಳಿದ್ದರೆ ಸಾರ್ವಜನಿಕರೂ ಬಿಬಿಎಂಪಿಗೆ ಮಾಹಿತಿ ನೀಡಬಹುದು’ ಎಂದು ಹೇಳಿದರು.
₹1 ಲಕ್ಷ ಪರಿಹಾರ: ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ ಸ್ಥಳೀಯ ಕಾರ್ಪೊರೇಟರ್ ಪದ್ಮಾವತಿ ಶ್ರೀನಿವಾಸ್ ರವರು ಬಾಲಕಿ ಕುಟುಂಬಕ್ಕೆ ₹1 ಲಕ್ಷ ಪರಿಹಾರ ಘೋಷಿಸಿದ್ದಾರೆ.