ಬೆಂಗಳೂರು: ‘ಹವಾಮಾನದ ಬದಲಾವಣೆ ಮತ್ತು ತಾಪಮಾನ ಹೆಚ್ಚಳವೇ ಅಧಿಕ ಮಳೆಗೆ ಕಾರಣ’ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ ತಿಳಿಸಿದರು.
ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಾಜ್ಯದಲ್ಲಿ ಅಧಿಕ ಮಳೆಯಿಂದ ಹಾನಿ ಹಾಗೂ ಕೆಲವು ವರ್ಷಗಳಲ್ಲಿ ಅಧಿಕ ಮಳೆಯಾಗಲು ಕಾರಣವೇನು?’ ಕುರಿತು ಉಪನ್ಯಾಸ ನೀಡಿದರು.
‘ಹವಾಮಾನ ಬದಲಾದಂತೆ ವಾತಾವರಣದಲ್ಲಿ ಒತ್ತಡ ಹೆಚ್ಚಾಗುತ್ತದೆ. ಆಗ ಮೋಡ ಕಟ್ಟಿ ಮಳೆಯಾಗುತ್ತದೆ. ಒತ್ತಡದ ಗಾಳಿ ಯಾವ ಕಡೆಗೆ ಬೀಸುತ್ತದೆಯೇ, ಆ ಭಾಗದಲ್ಲಿ ಮಳೆ ಸುರಿಯುತ್ತದೆ’ ಎಂದು ಹೇಳಿದರು.
‘ಸಾವಿರಾರು ವರ್ಷಗಳಿಂದ ಭೂಮಿ ಇದೆ. ಕಳೆದ 100 ವರ್ಷಗಳ ಮಳೆಯ ಲೆಕ್ಕವನ್ನು ಮಾತ್ರ ನಾವು ಹೊಂದಿದ್ದೇವೆ. ಅದರ ಆಧಾರದಲ್ಲಿ ನಾವು ಊಹೆ ಮಾಡುತ್ತಿದ್ದೇವೆ’ ಎಂದರು.
‘ನಾವು ಹೊಂದಿರುವ ತಂತ್ರಜ್ಞಾನದ ಸಹಾಯದಿಂದ ಮಳೆಯ ಮುನ್ಸೂಚನೆಯನ್ನು ನಾಲ್ಕೈದು ದಿನಗಳ ಮುಂಚೆಯಷ್ಟೇ ನೀಡಲು ಸಾಧ್ಯವಿದೆ. ಅದಕ್ಕಿಂತ ಹೆಚ್ಚಿನ ದಿನಗಳ ಮುನ್ಸೂಚನೆಯನ್ನು ನಿಖರವಾಗಿ ನೀಡಲು ಆಗುವುದಿಲ್ಲ’ ಎಂದು ಹೇಳಿದರು.
‘ಯಾವ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂಬುದರ ಮುನ್ಸೂಚನೆಯನ್ನು ನೋಂದಾಯಿತ ರೈತರಿಗೆ ಎಸ್ಎಂಎಸ್ ಮೂಲಕ ಕಳುಹಿಸುತ್ತಿದ್ದೇವೆ. 2008ರಿಂದಲೇ ಈ ವ್ಯವಸ್ಥೆ ಜಾರಿಯಲ್ಲಿ ಇದೆ’ ಎಂದು ತಿಳಿಸಿದರು.