ಬೆಂಗಳೂರು: ಮನೆಗಳಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಗಿರವಿ ಅಂಗಡಿಗಳಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ ಮಹಿಳೆಯನ್ನು ಚಂದ್ರಾ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಆನೆಪಾಳ್ಯದ ನಿವಾಸಿ ನಗ್ಮಾ (24) ಬಂಧಿತ ಆರೋಪಿ.
ಆರ್.ಪಿ.ಸಿ. ಬಡಾವಣೆಯ ಮನೆಯೊಂದರಲ್ಲಿ ಮಾಲೀಕರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಮನೆಯ ಬೀಗ ಒಡೆದು, ಮನೆಯಲ್ಲಿದ್ದ ₹2.80 ಲಕ್ಷ ಬೆಲೆಬಾಳುವ ಚಿನ್ನಾಭರಣ, ಬೆಳ್ಳಿ ಸಾಮಾನು ಹಾಗೂ ನಗದು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಆರಂಭಿಸಿದ್ದ ಪೊಲೀಸರು ನಗ್ಮಾಳ ಸಹಚರರಾದ ನಯಾಜ್ ಖಾನ್ ಹಾಗೂ ಅಪ್ಸರ್ ಅಹಮದ್ನನ್ನು ಬಂಧಿಸಿ, 69 ಗ್ರಾಂ ಚಿನ್ನದ ಗಟ್ಟಿ ವಶಕ್ಕೆ ಪಡೆದಿದ್ದರು. ಉಳಿದ ಚಿನ್ನ ನಗ್ಮಾ ಬಳಿ ಇರುವುದಾಗಿ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಈಕೆಯನ್ನೂ ಪೊಲೀಸರು ಬಂಧಿಸಿದ್ದಾರೆ.
ಐದು ಕಳವು ಪ್ರಕರಣಗಳಿಗೆ ಸಂಬಂಧಿಸಿದ ₹6.46 ಲಕ್ಷ ಬೆಲೆಬಾಳುವ 210 ಗ್ರಾಂ ಚಿನ್ನಾಭರಣ ಹಾಗೂ 500 ಗ್ರಾಂ ಬೆಳ್ಳಿ ಸಾಮಾನುಗಳನ್ನು ವಶಕ್ಕೆ ಪಡೆಯಲಾಗಿದೆ.