ಬೆಂಗಳೂರು: ಗೋವಿಂದರಾಜನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರು ಫಲಾನುಭವಿಗಳಿಗೆ ಬುಧವಾರ ಹಕ್ಕುಪತ್ರ ವಿತರಿಸಿದರು.
‘ಕಂದಾಯ ಇಲಾಖೆಯಿಂದ ನೂರಾರು ಎಕರೆ ಭೂಮಿಯನ್ನು ವಸತಿ ಇಲಾಖೆಗೆ ನೀಡಲಾಗಿದೆ. 1,800 ಕೊಳಚೆ ಪ್ರದೇಶದಲ್ಲಿ ರಾಜ್ಯದ ವಿವಿಧೆಡೆ ಇರುವ ಬಡವರಿಗೆ ಮೂರು ಲಕ್ಷ ಮನೆಗಳನ್ನು ನೀಡಲಾಗುತ್ತಿದೆ’ ಎಂದು ಸೋಮಣ್ಣ ಹೇಳಿದರು.
‘ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಕಾರ್ಯ ನನೆಗುದಿಗೆ ಬಿದ್ದಿತ್ತು. ಈಗ ಚಾಲನೆ ನೀಡಲಾಗಿದೆ. ಬ್ಯಾಂಕ್ನಿಂದ ಸಾಲ ಪಡೆದು ಮನೆ ಕಟ್ಟಿಕೊಳ್ಳಬಹುದು. ಐದು ವರ್ಷಗಳವರೆಗೆ ಹಕ್ಕುಪತ್ರವನ್ನು ಪರಭಾರೆ ಮಾಡುವಂತಿಲ್ಲ’ ಎಂದೂ ಅವರು ಹೇಳಿದರು.
‘ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಉದ್ದೇಶ ಈಡೇರಿಕೆಗಾಗಿಯೇ ಕಂದಾಯ ಇಲಾಖೆಯ ಭೂಮಿಯನ್ನು ವಸತಿ ಇಲಾಖೆಗೆ ನೀಡಲಾಗಿದೆ’ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.