ಬೆಂಗಳೂರು:ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ವೇತನ ಪರಿಷ್ಕರಣೆ,ಸಾಮೂಹಿಕ ವಿಮಾ ಯೋಜನೆಯ (ಜಿಐಎಸ್) ವಿಮಾ ಸೌಲಭ್ಯವನ್ನು ಕನಿಷ್ಠ ₹ 5 ಲಕ್ಷದಿಂದ ₹ 20 ಲಕ್ಷಕ್ಕೆ ಹೆಚ್ಚಳ ಸಹಿತ ಸರ್ಕಾರಿ ನೌಕರರ ಹಲವು ಬೇಡಿಕೆಗಳಿಗೆ ಸಂಬಂಧಿಸಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆಮನವರಿಕೆ ಮಾಡಲಾಯಿತು.
ಇಲ್ಲಿ ಬಜೆಟ್ಗೆ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಸಂಘದ ಅಧ್ಯಕ್ಷಸಿ.ಎಸ್.ಷಡಾಕ್ಷರಿ ಅವರು ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮನವಿಪತ್ರ ಸಲ್ಲಿಸಿದರು. ಈ ಬಜೆಟ್ನಲ್ಲೇ ಇದಕ್ಕೆ ಅನುಮತಿ ಕೊಡಬೇಕು ಎಂದು ಒತ್ತಾಯಿಸಿದರು.
ನೂತನ ಪಿಂಚಣಿ ಯೋಜನೆ ಪದ್ಧತಿಯನ್ನು ರದ್ದುಪಡಿಸಬೇಕು, ಔರಾದ್ಕರ್ವರದಿ ಅನುಷ್ಠಾನ ಗೊಳಿಸಬೇಕು, 6ನೇ ವೇತನ ಆಯೋಗದ ಅಂತಿಮ ವರದಿಯನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕು, ತಿಂಗಳ ಮೊದಲ ವಾರದಲ್ಲೇವೇತನ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗ್ರಾಮ ಸಹಾಯಕರ ಕನಿಷ್ಠ ವೇತನ ಹೆಚ್ಚಿಸಬೇಕು, ಶಿಕ್ಷಣ ಇಲಾಖೆಯ ಬೋಧಕ ಸಿಬ್ಬಂದಿ ವೇತನ ಬಡ್ತಿಯ ತಾರತಮ್ಯ ಸರಿಪಡಿಸಬೇಕು,ದಿನಗೂಲಿ ನೌಕರರಿಗೆ ಮೂಲಸೌಕರ್ಯ ಕಲ್ಪಿಸಬೇಕು, ಕಲ್ಯಾಣಕರ್ನಾಟಕ 371 ಜೆ ಕಚೇರಿ ಬೆಂಗಳೂರಿನಿಂದ ಕಲಬುರ್ಗಿಗೆ ಸ್ಥಳಾಂತರಿಸಬೇಕು ಎಂದು ಸಹ ಆಗ್ರಹಿಸಲಾಗಿದೆ.
ಹೆಚ್ಚುವರಿ ಸರ್ಕಾರಿ ವಸತಿ ಗೃಹ ನಿರ್ಮಾಣ,ವೇತನ ಸೆಳೆಯುವ ಅನಗತ್ಯ ಡಿಡಿಒ ಕೋಡ್ ರದ್ದತಿ, ಕೆಜಿಐಡಿ ಗಣಕೀಕರಣದತ್ತಲೂ ಗಮನ ಹರಿಸಲು ವಿನಂತಿಸಲಾಯಿತು.
ಸಂಘದ ವಿವಿಧ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.