ಬೆಂಗಳೂರು: ‘ಮನೆಯಲ್ಲಿ ಹಸಿರು ಕಲ್ಲು ಇಟ್ಟು ಪೂಜೆ ಮಾಡಿದರೆ ಬೇಗನೇ ಶ್ರೀಮಂತರಾಗುತ್ತೀರಿ’ ಎಂದು ನಂಬಿಸಿ, ಆ ಕಲ್ಲನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಅರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
‘ಅವಲಹಳ್ಳಿಯ ಶ್ರೀನಿವಾಸ್ (36), ರಾಮಮೂರ್ತಿನಗರದ ಹರೀಶ್ (26) ಹಾಗೂ ಮಾರಗೊಂಡನಹಳ್ಳಿಯ ತಿರುಪ್ಪತಪ್ಪ (36) ಬಂಧಿತರು. ಆರೋಪಿಗಳಿಂದ ಕಲ್ಲು ಹಾಗೂ ಆಟೋ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಇದೇ 22ರಂದು ಆರೋಪಿಗಳು ಅಂಜನಾನಗರದಲ್ಲಿ ಆಟೊ ನಿಲ್ಲಿಸಿಕೊಂಡು ಹಸಿರು ಕಲ್ಲು ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಅವರನ್ನು ಬಂಧಿಸಲಾಗಿದೆ’ ಎಂದರು.
‘ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನೇ ಕಲ್ಲು ಮಾರಾಟ ಮಾಡಲು ಹೇಳಿದ್ದನೆಂದು ಆರೋಪಿಗಳು ಹೇಳುತ್ತಿದ್ದಾರೆ’ ಎಂದು ತಿಳಿಸಿದರು.