ಬೆಂಗಳೂರು: ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಬಣದ ಶಾಸಕರ ಮಧ್ಯೆಶುಕ್ರವಾರವೂ ಮಾತಿನ ಚಕಮಕಿ ಮುಂದುವರೆಯಿತು.
ಎಚ್.ವಿಶ್ವನಾಥ್ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ‘ಎಂ.ಪಿ.ರೇಣುಕಾಚಾರ್ಯ ಮತ್ತು ನರ್ಸ್ ಜಯಲಕ್ಷ್ಮಿ ಪ್ರಕರಣ ಏನಾಯಿತು. ಎಸ್.ಆರ್. ವಿಶ್ವನಾಥ್ ಒಬ್ಬ ಬಚ್ಚಾ. ನನ್ನಂತ ಅರೆ ಹುಚ್ಚನ ತ್ಯಾಗದಿಂದಲೇ ಆತ ಬಿಡಿಎ ಅಧ್ಯಕ್ಷನಾಗಿ ಕೋಟಿ ಕೋಟಿ ಲೂಟಿ ಮಾಡಿದ್ದಾನೆ. ಹಾಲಪ್ಪ ತನ್ನ ಸ್ನೇಹಿತನ ಮನೆಗೆ ಹೋಗಿ ಅತ್ಯಾಚಾರ ಮಾಡಿದ’ ಎಂದು ಹರಿಹಾಯ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರೇಣುಕಾ ಚಾರ್ಯ, ‘ವಿಶ್ವನಾಥ್ ಅವರ ಆಡಿಯೊ, ವಿಡಿಯೋ ನನ್ನ ಬಳಿ ಇದೆ. ತುಂಬಾ ಸಂಭಾವಿತನ ಹಾಗೆ ವರ್ತಿಸುವ ಇವರು ಆಡಿಯೊದಲ್ಲಿರುವ ಮಾತುಗಳು ಕೇಳಿದರೆ, ಇವರ ಸಂಸ್ಕೃತಿ ಎಂಥದ್ದು ಎಂಬುದು ಗೊತ್ತಾಗುತ್ತದೆ’ ಎಂದು ಹೇಳಿದರು.
‘ವಯಸ್ಸಾಗಿರುವ ಅವರು ಆಡಿರುವ ಮಾತುಗಳು ಅಸಂಬದ್ಧ, ಕೇಳುವುದಕ್ಕೂ ಹೊಲಸು’ ಎಂದು ಹರಿಹಾಯ್ದರು.
ಶಾಸಕ ಹರತಾಳು ಹಾಲಪ್ಪ, ‘ನನ್ನ ವಿರುದ್ಧ ಮಾತನಾಡಿರುವ ವಿಶ್ವನಾಥ್ಗೆ ನ್ಯಾಯಾಲಯದ ಮೂಲಕವೇ ನೋಟಿಸ್ ಕೋಡುತ್ತೇನೆ. ನನ್ನ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ’ ಎಂದು ಹೇಳಿದರು.
‘ಇವರು ಯಾವ ಪಕ್ಷದಲ್ಲಿದ್ದರೂ ಆ ಪಕ್ಷಕ್ಕೆ ದ್ರೋಹ ಮಾಡಿದವರು. ಉಂಡ ಮನೆಗೆ ಎರಡು ಬಗೆಯುವುದು ಇವರ ಹುಟ್ಟು ಗುಣ. ಇವರ ಬಾಯಿಗೆ ಬೀಗ ಹಾಕದೇ ಇದ್ದರೆ ಪಕ್ಷಕ್ಕೆ ಮುಜುಗರ ತಪ್ಪಿದ್ದಲ್ಲ’ ಎಂದು ಹರತಾಳು ಹಾಲಪ್ಪ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.