ಬೆಂಗಳೂರು: ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸಂಸ್ಥೆಯು ಹಳೆಯ ವಿಮಾನನಿಲ್ದಾಣ ರಸ್ತೆಯಲ್ಲಿರುವ ತನ್ನ ಘಾಟೇಜ್ ಸಮಾವೇಶ ಕೇಂದ್ರವನ್ನು 160 ಹಾಸಿಗೆ ವ್ಯವಸ್ಥೆಯುಳ್ಳ ಕೋವಿಡ್ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಿದೆ.
ಕೊರೊನಾ ರೋಗಿಗಳಿಗಾಗಿ ಸಿದ್ಧಗೊಂಡಿರುವ ಚಿಕಿತ್ಸಾ ಕೇಂದ್ರವನ್ನು ಪಾಲಿಕೆಗೆ ಎಚ್ಎಎಲ್ ಶುಕ್ರವಾರಹಸ್ತಾಂತರಿಸಿತು. ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಪಾಲಿಕೆಯು ಈ ಚಿಕಿತ್ಸಾ ಕೇಂದ್ರವನ್ನು ಮುನ್ನಡೆಸಲಿದೆ.
ಕೊರೊನಾ ನಿರ್ವಹಣಾ ಕೇಂದ್ರ ತೆರೆಯುವ ಸಲುವಾಗಿ ಎಚ್ಎಎಎಲ್ ಅಧಿಕಾರಿಗಳು ಹಾಗೂ ಪಾಲಿಕೆ ನಡುವೆ ಒಪ್ಪಂದವಾಗಿತ್ತು. ಪಾಲಿಕೆಯ ಮಹದೇವಪುರ ವಲಯದ ಜಂಟಿ ಆಯುಕ್ತ ಆರ್.ವೆಂಕಟಾಚಲಪತಿ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದರು.
'ಈ ಕೇಂದ್ರದಲ್ಲಿ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ರೋಗಿಗಳ ಅನುಕೂಲಕ್ಕಾಗಿ ಶೌಚಾಲಯಗಳನ್ನು ಮತ್ತು ಸ್ನಾನಗೃಹಗಳನ್ನು16 ದಿನಗಳಲ್ಲಿ ನಿರ್ಮಿಸಲಾಗಿದೆ. ಸೋಂಕಿತರ ಚಿಕಿತ್ಸೆಗೆ ಈ ಕೇಂದ್ರವನ್ನು ಬಳಸಿಕೊಳ್ಳಬಹುದು' ಎಂದು ಎಚ್ಎಎಲ್ನ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಮಾಹಿತಿ ನೀಡಿದರು.