ಬೆಂಗಳೂರು: ಕೊರೊನಾ ಇರುವುದರಿಂದ ನಗರದಾದ್ಯಂತ ಹನುಮಂತನ ದೇಗುಲಗಳಲ್ಲಿ ಮಂಗಳವಾರ ಸರಳವಾಗಿಹನುಮ ಜಯಂತಿ ನೆರವೇರಿತು.
ಹನುಮ ಜಯಂತಿ ಅಂಗವಾಗಿ ಪ್ರತಿ ವರ್ಷ ಹನುಮಂತನ ವಿಶೇಷ ಪೂಜೆ, ಮೆರವಣಿಗೆ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿತ್ತು. ಕೊರೊನಾ ತಡೆಗಾಗಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿರುವುದರಿಂದ ಹನುಮಂತನಿಗೆಸಾಂಕೇತಿಕವಾಗಿ ಪೂಜೆ ಮಾತ್ರ ನಡೆಯಿತು.
ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದಲ್ಲಿಹನುಮ ಜಯಂತಿ ಪ್ರಯುಕ್ತ ಹಿರಿಯ ವ್ಯವಸ್ಥಾಪಕ ಆರ್.ಕೆ.ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಆಂಜನೇಯಸ್ವಾಮಿಗೆ ಜೇನುತುಪ್ಪ ಸಹಿತ ಮಧು ಅಭಿಷೇಕ ಮಾಡಲಾಯಿತು.
‘ಮಠಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಇಲ್ಲದ ಕಾರಣ ಭಕ್ತರ ಹೆಸರುಗಳಿಂದ ಸಂಕಲ್ಪಿಸಿ, ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ‘ಸತ್ಯನಾರಾಯಣ ವ್ರತ’ ಪೂಜೆಯು ನೆರವೇರಿಸಲಾಯಿತು’ ಎಂದು ಪುರೋಹಿತ ಕಿಶೋರ್ ಆಚಾರ್ಯ ತಿಳಿಸಿದರು.
ಆನ್ಲೈನ್ ಸಪ್ತಾಹ: ಹಿಂದೂ ಜನಜಾಗೃತಿ ಸಮಿತಿಯುಹನುಮ ಜಯಂತಿ ಅಂಗವಾಗಿ ಆನ್ಲೈನ್ ಮೂಲಕ ‘ಬಲೋಪಸನಾ ಸಪ್ತಾಹ’ ಆಯೋಜಿಸಿತ್ತು.ಒಂದು ವಾರದಿಂದ ನಡೆದ ಸಪ್ತಾಹದಲ್ಲಿ ಪ್ರತಿದಿನ ಸಂಜೆ 7ರಿಂದ 8ಗಂಟೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಯುವಜನರು ಭಾಗವಹಿಸಿದ್ದರು.