ಬೆಂಗಳೂರು: ‘ಕೇಂದ್ರ ಸರ್ಕಾರ ಘೋಷಿಸಿರುವ ₹20 ಲಕ್ಷ ಕೋಟಿಕೋವಿಡ್ ಪ್ಯಾಕೇಜ್ ಒಂದು ಸುಳ್ಳಿನ ಕಂತೆ. ಅದೊಂದು ಜುಮ್ಲಾ ಪ್ಯಾಕೇಜ್’ ಎಂದುಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಟೀಕಿಸಿದರು.
ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದಿಂದ ಕೋವಿಡ್ ಸೈನಿಕರಿಗಾಗಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಕೋವಿಡ್ – 19 ನ್ನು ನಿರ್ವಹಣೆ ಮಾಡುವುದರಲ್ಲಿ ಸಂಪೂರ್ಣ ವಿಫಲವಾಗಿದ್ದು, ಅವೈಜ್ಞಾನಿಕ ಲಾಕ್ಡೌನ್ ಮತ್ತು ಯೋಜಿತ ಕಾರ್ಯಕ್ರಮವಿಲ್ಲದೇ ವಲಸೆ ಕಾರ್ಮಿಕರು ಹಸಿವಿನಿಂದ ಸಾಯುವ ಸ್ಥಿತಿ ನಿರ್ಮಾಣ ಮಾಡಿದೆ’ ಎಂದು ದೂರಿದರು.
‘ರಾಜ್ಯದ ಕಾರ್ಮಿಕ ಇಲಾಖೆ ನೀಡಲಾದ 7 ಲಕ್ಷ ಪಡಿತರ ಕಿಟ್ ನಿಜವಾದ ಫಲಾನುಭವಿಗಳ ಮನೆ ಸೇರಿಲ್ಲ. ಬದಲಾಗಿ ಬಿಜೆಪಿ ಕಾರ್ಯಕರ್ತರ ಪಾಲಾಗಿದೆ’ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.
‘ರಾಜಕಾರಣ ಚುನಾವಣೆಗೆ ಸೀಮಿತವಾಗಬೇಕೆ ವಿನಾ ಬಡವರ ಪರಿಹಾರ ನೀಡುವ ವಿಚಾರದಲ್ಲೂ ರಾಜಕಾರಣ ಮಾಡುವುದು ನೀಚತನ’ ಎಂದರು.
ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗು ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಲಾಯಿತು. ಸ್ಥಳೀಯ ಕಾಂಗ್ರೆಸ್ ಮುಖಂಡ ಗೋಪಾಲರೆಡ್ಡಿ, ಪರಿಷತ್ ಸದಸ್ಯ ನಾರಾಯಣಸ್ವಾಮಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಪಾಲಿಕೆ ಸದಸ್ಯ ಚಂದ್ರಪ್ಪ ಇದ್ದರು.