ಪೀಣ್ಯ ದಾಸರಹಳ್ಳಿ: 'ಸರ್ಕಾರಿ ದಿನಸಿ ಕಿಟ್ಗಳ ಮೇಲೆ ಆಡಳಿತ ಪಕ್ಷದವರು ಭಾವಚಿತ್ರಗಳನ್ನು ಮುದ್ರಿಸಿ ಸ್ವಂತದ್ದೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ' ಎಂದು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಕಿಡಿಕಾರಿದರು.
ಇಲ್ಲಿಗೆ ಸಮೀಪದ ಲಕ್ಷ್ಮಿಪುರ ಗ್ರಾಮದಲ್ಲಿ ಚರಣ್ ಗೌಡ ನೇತೃತ್ವದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು
'ಸಂಕಷ್ಟ ಸಮಯದಲ್ಲಿ ಬಡವರಿಗೆ ವಿತರಿಸುತ್ತಿರುವ ಆಹಾರದ ವಿಚಾರದಲ್ಲೂ ಆಡಳಿತ ಪಕ್ಷದ ಜನಪ್ರತಿನಿಧಿಗಳು ರಾಜಕಾರಣ ಮಾಡುತ್ತಿರುವುದು ಸರಿಯೇ?' ಎಂದು ಪ್ರಶ್ನಿಸಿದರು.
'ಜೆಡಿಎಸ್ ಜನಪ್ರತಿನಿಧಿಗಳು ಹಾಗೂ ಮುಖಂಡರು ಆಹಾರದ ಪೊಟ್ಟಣ ಹಾಗೂ ದಿನಸಿ ವಿತರಿಸುವ ಮೂಲಕ ಬಡವರ ಹಸಿವು ನೀಗಿಸುವ ಕೆಲಸ ಮಾಡಿದ್ದಾರೆ 'ಎಂದು ಶ್ಲಾಘಿಸಿದರು.
ಇದೇ ವೇಳೆ ಹೆಗ್ಗನಹಳ್ಳಿಯ ಎಚ್.ಎನ್ ಗಂಗಾಧರ್ ನೇತೃತ್ವದ ಎಚ್ .ಡಿ.ಕೆ ಕ್ಯಾಂಟೀನ್ಗೆ ಭೇಟಿ ನೀಡಿದರು. ಸರತಿ ಸಾಲಿನಲ್ಲಿ ನಿಂತ ಬಡವರಿಗೆ ದೇವೇಗೌಡರು ಹೋಳಿಗೆ ಊಟ ಬಡಿಸಿದರು. ಜತೆಗೆ ಎಚ್.ಆರ್ ಪ್ರಕಾಶ್ ನೇತೃತ್ವದಲ್ಲಿ ಬಡವರಿಗೆ ಸುಮಾರು 5 ಸಾವಿರ ದಿನಸಿ ಕಿಟ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.