ಬೆಂಗಳೂರು: ಪುಣೆಯ ವಾಯುಸೇನೆಯ ಕರ್ನಲ್ ಒಬ್ಬರಿಗೆ, ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಮೂತ್ರಪಿಂಡ ಕಸಿ ಮಾಡಲು, ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಹೈಕೋರ್ಟ್ ಆದೇಶಿಸಿದೆ.
ಕರ್ನಲ್ ಅವರ ಮೂತ್ರಪಿಂಡ ಕಸಿಗೆ ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ಅನುಮತಿ ನಿರಾಕರಿಸಿದ್ದರು. ಇದನ್ನು ಮೂತ್ರಪಿಂಡ ನೀಡಲು ಸಿದ್ಧವಿರುವ ಮಹಿಳೆ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ಈ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ, ಆಸ್ಪತ್ರೆಯ ಮಾನವ ಅಂಗಾಂಗಗಳ ಕಸಿ ಅನುಮೋದನಾ ಸಮಿತಿ ಮುಖ್ಯಸ್ಥರಿಗೆ ತಕ್ಷಣದ ಕ್ರಮಕ್ಕೆ ಆದೇಶಿಸಿದೆ.
ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಆಯುಕ್ತರು ಹಾಗೂ ಮಾನವ ಅಂಗಾಂಗಗಳ ಕಸಿ ಅನುಮೋದನಾ ಸಮಿತಿ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆಯೂ ಸೂಚಿಸಿದೆ.
‘ಮೂತ್ರಪಿಂಡ ಕಸಿಗೆ ಅನುಮತಿ ನಿರಾಕರಿಸಿ ರಾಜ್ಯ ಆರೋಗ್ಯ ಇಲಾಖೆ ಏ.10ರಂದು ಆದೇಶಿಸಲಾಗಿದೆ. ಇದು ವ್ಯಾಪ್ತಿ ಮೀರಿ ಹೊರಡಿಸಿರುವ ಆದೇಶ’ ಎಂಬುದು ಅರ್ಜಿದಾರರ ಆಕ್ಷೇಪ. ಅರ್ಜಿದಾರರ ಪರ ಪಿ.ಅನುಚೆಂಗಪ್ಪ ಹಾಜರಿದ್ದರು.