ಬೆಂಗಳೂರು, ಮೇ 29– ಇಂದು ರಾಜ್ಯದ ಅಧಿಕಾರ ವಹಿಸಿಕೊಂಡ ನೂತನ ಮಂತ್ರಿ ಮಂಡಲದಲ್ಲಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಗೃಹಖಾತೆ, ಭಾರಿ ನೀರಾವರಿ, ವಿದ್ಯುತ್ ಹಾಗೂ ಜಲ ವಿದ್ಯುತ್ ಯೋಜನೆಗಳ ಖಾತೆಗಳನ್ನು ವಹಿಸಿಕೊಂಡಿದ್ದಾರೆ.
ಸ್ಟೇಟ್ ಸಚಿವರ ಅಧಿಕಾರ ವ್ಯಾಪ್ತಿ
ಬೆಂಗಳೂರು, ಮೇ 29– ಮಂತ್ರಿ ಮಂಡಲದ ಸಭೆಯಲ್ಲಿ ಭಾಗವಹಿಸುವುದೊಂದನ್ನು ಬಿಟ್ಟು ಸ್ಟೇಟ್ ಸಚಿವರುಗಳಿಗೆ ಉಳಿದೆಲ್ಲ ಹಕ್ಕು ಹಾಗೂ ಅಧಿಕಾರಗಳೂ ಇರುತ್ತವೆ. ಈ ವಿಷಯವನ್ನು ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿ ‘ಸ್ಟೇಟ್ ಸಚಿವರ ಸಂಬಳದ ಪ್ರಶ್ನೆಯನ್ನು ಪರಿಶೀಲಿಸಬೇಕಾಗಿದೆ’ ಎಂದರು.
ಸಚಿವರ ಸಂಬಳದ ಈಗಿನ ಕಾನೂನಿನಲ್ಲಿ ಸ್ಟೇಟ್ ಸಚಿವರ ಬಗ್ಗೆ ಪ್ರಸ್ತಾಪವಿಲ್ಲ. ಸ್ಟೇಟ್ ಸಚಿವ ಹುದ್ದೆ ಮೈಸೂರು ರಾಜ್ಯದಲ್ಲಿ ನಿರ್ಮಾಣವಾಗಿರುವುದು ಇದೇ ಪ್ರಥಮ.
ಪ್ರಜೆಗೆ ಮಣಿದು ಅಡಿ ಇಟ್ಟ ಮೊದಲ ದಿನ: ‘ನಾನು ಮಾಡುವ ಕೆಲಸದ ಮೇಲೆ ಜನರು ನನ್ನ ಬಗ್ಗೆ ತೀರ್ಮಾನಕ್ಕೆ ಬರಲಿ, ಅವರೇ ಅಂತಿಮ ಯಜಮಾನರು. ಅವರ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ’
ನೂತನ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ರಾಜ್ಯದ ಜನತೆಗೆ ನಮ್ರ ಮನವಿ ಮಾಡಿದರು.
ದೊಡ್ಡಮೇಟಿ ಒಬ್ಬರೇ ಕನ್ನಡದಲ್ಲಿ
ಬೆಂಗಳೂರು, ಮೇ 29– ಇಂದು ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರು, ಉಪಸಚಿವರುಗಳ ಪೈಕಿ ಒಬ್ಬರು ಮಾತ್ರ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು.