ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಭಾನುವಾರ ಸಂಜೆ ಮಳೆ ಸುರಿಯಿತು. ಮಧ್ಯಾಹ್ನದಿಂದಲೇ ಹಲವೆಡೆ ಮೋಡ ಕವಿದ ವಾತಾವರಣವಿತ್ತು.
ನಗರದಲ್ಲಿ ಕೆಲದಿನಗಳಿಂದ ಆಗಾಗ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳುತ್ತಿದೆ. ಭಾನುವಾರ ಸಂಜೆ ಕೆಲವೆಡೆ ಜೋರು ಮಳೆಯೇ ಸುರಿಯಿತು.
ರಾಜರಾಜೇಶ್ವರಿನಗರ, ನಾಗರಬಾವಿ, ಜ್ಞಾನಭಾರತಿ, ಚಂದ್ರಾಲೇಔಟ್, ವಿಜಯನಗರ, ಬಸವೇಶ್ವರನಗರ, ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮಳೆ ಆಯಿತು.
ಮಡಿವಾಳ, ಕೋರಮಂಗಲ, ಅಶೋಕನಗರ, ಶಿವಾಜಿನಗರ, ಎಂ.ಜಿ.ರಸ್ತೆ, ಹಲಸೂರು, ದೊಮ್ಮಲೂರು, ಇಂದಿರಾನಗರ, ಬೈಯಪ್ಪನಹಳ್ಳಿ, ಸಂಪಂಗಿರಾಮ ನಗರ, ವಿಲ್ಸನ್ ಗಾರ್ಡನ್, ಶಾಂತಿನಗರ, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಕಲಾಸಿಪಾಳ್ಯ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಸಿಂಚನವಾಯಿತು.
ಬಹುತೇಕ ಪ್ರದೇಶಗಳಲ್ಲಿ ತುಂತುರು ಮಳೆ ಸುರಿದಿದ್ದು, ಕೆಲವೆಡೆ ಮಾತ್ರ ಮಳೆ ಅಬ್ಬರ ಜೋರಾಗಿತ್ತು.
ಭಾನುವಾರ ರಜೆ ದಿನವಾಗಿದ್ದರಿಂದ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಕಟ್ಟೆ ಪ್ರದೇಶಗಳಿಗೆ ಬಂದಿದ್ದರು. ಕೆಲವರು, ಸುರಿಯುವ ಮಳೆಯಲ್ಲೇ ಕೊಡೆ ಹಿಡಿದು ಓಡಾಡಿದರು. ಮಳೆಯಿಂದಾಗಿ ವಾಹನ ದಟ್ಟಣೆಯೂ ಇತ್ತು.
‘ನಗರದ ಕೆಲ ಭಾಗದಲ್ಲಿ ಸಾಧಾರಣ ಮಳೆ ಆಗಿದೆ. ಕೆಲವೆಡೆ ರಸ್ತೆಯಲ್ಲಿ ನೀರು ಹರಿದು, ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಉಳಿದಂತೆ ಯಾವುದೇ ಹಾನಿ ಸಂಭವಿಸಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.