ಬೆಂಗಳೂರು: ಕೇಂದ್ರ ಭಾಗವೂ ಸೇರಿದಂತೆ ನಗರದ ವಿವಿಧ ಕಡೆ ಮಂಗಳವಾರ ರಾತ್ರಿ ಕೂಡ ಧಾರಾಕಾರ ಮಳೆ ಸುರಿದಿದೆ.
ಅಷ್ಟೇ ಅಲ್ಲ, ಇನ್ನೂ ಎರಡು ದಿನ ಮೋಡ ಕವಿದ ವಾತಾವರಣದ ಜೊತೆಗೆ, ಕೆಲವು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರ ಮತ್ತು ಹೊರವಲಯದಲ್ಲಿ ಸೋಮವಾರ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಸಂಜೆ ಆಗುತ್ತಿದ್ದಂತೆ ಮಳೆ ಸುರಿದಿದೆ.
ಬೊಮ್ಮನಹಳ್ಳಿಯ ಗುಟ್ಟಿಗೆರೆ, ಬಸವನಗುಡಿ, ವಿದ್ಯಾಪೀಠ, ಅಂಜನಾಪುರ, ಮಹದೇವಪುರದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದೆ.
ಗಿರಿನಗರದಲ್ಲಿ ಬೃಹದಾಕಾರದ ಮರ ನೆಲಕ್ಕುರುಳಿದೆ. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ. ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು ಮರ ತೆರವುಗೊಳಿಸಿದರು. ಅಲ್ಲದೆ, ಗಿರಿನಗರದಲ್ಲಿ 162 ವಾರ್ಡ್ನ 11ನೇ ಅಡ್ಡರಸ್ತೆಯ ಮನೆಯೊಂದಕ್ಕೆ ನೀರು ನುಗ್ಗಿದೆ. ಮಳೆಯಿಂದಾಗಿ ನಗರದ ಹಲವು ಕಡೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.