ಬೆಂಗಳೂರು: ರಾಜಧಾನಿಯಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಹಲವು ರಸ್ತೆಗಳು ಹೊಳೆಯಂತೆ ಆಗಿದ್ದವು. ರಾತ್ರಿ 11.30 ಗಂಟೆಯಾದರೂ ಮಳೆ ನಿಂತಿರಲಿಲ್ಲ.
ಬಳ್ಳಾರಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನಗಳು ಮುಂದೆ ಸಾಗಲು ಸಾಧ್ಯವಾಗಲಿಲ್ಲ. ರಾತ್ರಿ ಪಾಳಿ ಮುಗಿಸಿ ಮನೆಗೆ ತೆರಳುವವರು ಪರದಾಟ ನಡೆಸಿದರು.
ಮೈಸೂರು ರಸ್ತೆಯ ಸ್ಯಾಟಲೈಟ್ ಸಮೀಪದ ಕಾಲುವೆಗಳಲ್ಲಿ ಅಪಾರ ಪ್ರಮಾಣದ ನೀರು ಹರಿಯಿತು. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ರಸ್ತೆಯಲ್ಲೂ ಮಳೆಯ ನೀರು ಸಂಗ್ರಹಗೊಂಡಿತ್ತು.
ಜೆಸಿ ನಗರದ ದೂರದರ್ಶನದ ಬಳಿ ಆಟೊ ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದಾರೆ.
ಕುಮಾರಸ್ವಾಮಿಲೇಔಟ್, ಫೈಯಜಾಬಾದ್ ಹಾಗೂ ಯಲಚೇನಹಳ್ಳಿ ಭಾಗದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಮತ್ತೆ ಅವಾಂತರ ಸೃಷ್ಟಿಯಾಯಿತು. ಶನಿವಾರ ರಾತ್ರಿ ಸುರಿದ ಮಳೆಯಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಹ ಕಡಿತಗೊಂಡು ಜನರು ಸಂಕಷ್ಟ ಎದುರಿಸಿದರು.