ಬೆಂಗಳೂರು: ಹೆಸರಘಟ್ಟ ಹೋಬಳಿ ಐವರಕಂಡಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ನಿಯಮಿತವಾಗಿ ಬಾರದೆ ಇರುವುದರಿಂದ ಗ್ರಾಮಸ್ಥರು ಪರದಾಡುವಂತಾಗಿದೆ.
ಡಾ.ದಿವ್ಯಾ ಅವರನ್ನು ಹದಿನೈದು ದಿನಗಳ ಹಿಂದೆ ಇಲ್ಲಿಗೆ ನಿಯೋಜನೆ ಮಾಡಲಾಗಿದೆ. ಆದರೆ ಅವರು ಮಧ್ಯಾಹ್ನ 12ರ ಬಳಿಕ ಬರುತ್ತಾರೆ. ರೋಗಿಗಳು ಕಾಯಬೇಕಾದ ಪರಿಸ್ಥಿತಿ ಇದೆ.
ಸುತ್ತಮುತ್ತಲಿನ ಗ್ರಾಮಗಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಇದೇ ಆರೋಗ್ಯ ಕೇಂದ್ರವನ್ನು ಅವಲಂಬಿಸಿದ್ದಾರೆ.
‘ಖಾಸಗಿ ಕ್ಲಿನಿಕ್ಗಳಿಗೆ ಹೋಗಿ ಚಿಕಿತ್ಸೆ ಪಡೆಯುವ ಸಾಮರ್ಥ್ಯ ನಮಗೆ ಇಲ್ಲ. ಸರ್ಕಾರಿ ವೈದ್ಯರು ಹೀಗೆ ಮಾಡಿದರೆ ನಮ್ಮ ಗತಿ ಏನು?’ ಎಂದು ಮತ್ಕೂರು ಗ್ರಾಮದಿಂದ ಬಂದಿದ್ದ ಸರೋಜಮ್ಮ ಹೇಳಿದರು.
ಯಲಹಂಕ ಉತ್ತರ ವಲಯದ ವೈದ್ಯಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ ‘ಸರಿಯಾದ ಸಮಯಕ್ಕೆ ಬರದಿದ್ದರೆ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.