ಹೆಸರಘಟ್ಟ: ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರನ್ನು ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು ನಿಂದಿಸಿದ ಘಟನೆ ಚಿಕ್ಕಬಾಣಾವರ ಗ್ರಾಮಸಭೆಯಲ್ಲಿ ನಡೆಯಿತು. ಈ ವೇಳೆ, ಮಾಧ್ಯಮದವರ ಮೇಲೂ ದೌರ್ಜನ್ಯ ನಡೆಸಿದರು.
‘ಮಳೆ ಬಂದರೆ ರಾಜಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗುತ್ತದೆ. ಓಟು ಕೇಳಲು ಮಾತ್ರ ನೀವು ಬರುತ್ತೀರ. ನಮ್ಮ ಸಮಸ್ಯೆ ಬಗೆಹರಿಸಿಲ್ಲ. ಕಳೆದ ಹತ್ತು ವರ್ಷಗಳಿಂದ ನಮ್ಮ ಗೋಳು ಕೇಳುವವರಿಲ್ಲ. ರಾಜಕಾಲುವೆಯನ್ನು ಅಳತೆ ಮಾಡಿ ತಡೆಗೋಡೆ ನಿರ್ಮಾಣ ಮಾಡಿ’ ಎಂದು ಮಹಿಳೆಯೊಬ್ಬರು ಮನವಿ ಮಾಡಿಕೊಂಡರು.
ಬಿಜೆಪಿ ಬೆಂಬಲಿತ ಪಂಚಾಯಿತಿ ಸದಸ್ಯರೊಬ್ಬರು, ‘ಇರಮ್ಮ ಸಾಕು, ರಾಜಕಾಲುವೆ ಬಳಿ ಮನೆ ಯಾಕೆ ಕಟ್ಟಿಕೊಂಡೆ’ ಎಂದು ಮಹಿಳೆಯನ್ನು ನಿಂದಿಸಿದರು. ಇದನ್ನು ಚಿತ್ರೀಕರಿಸಲು ಮುಂದಾದ ಮಾಧ್ಯಮದವರ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾದರು. ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.
ಸಭೆ ಹತೋಟಿಗೆ ಬಂದ ಬಳಿಕ ದಾಸರಹಳ್ಳಿ ಶಾಸಕ ಆರ್. ಮಂಜುನಾಥ್, ‘ಮಾಧ್ಯಮದವರ ಮೇಲೆ ಹಲ್ಲೆಗೆ ಮುಂದಾಗಿದ್ದು ಖಂಡನೀಯ. ಸದಸ್ಯರ ಪರವಾಗಿ ಕ್ಷಮೆ ಕೇಳುತ್ತೇನೆ’ ಎಂದರು.