ಬೆಂಗಳೂರು: ಕೋವಿಡ್ ಸೋಂಕು ದೃಢಪಟ್ಟಿರುವ 52 ಪೌರಕಾರ್ಮಿಕರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಲು ತಿಳಿಸಲಾಗಿದೆ ಎಂದು ಹೈಕೋರ್ಟ್ಗೆ ಬಿಬಿಎಂಪಿ ಮಾಹಿತಿ ನೀಡಿದೆ. ‘ಪ್ರತ್ಯೇಕವಾಗಿ ಇರಲು ಮನೆಯಲ್ಲಿ ಅವರಿಗೆ ಸೌಲಭ್ಯಗಳು ಇದೆಯೇ ಎಂಬುದನ್ನು ಪರಿಶೀಲಿಸಲಾಗಿದೆಯೇ’ ಎಂದು ಹೈಕೋರ್ಟ್ ಪ್ರಶ್ನಿಸಿದೆ.
‘11,902 ಪೌರಕಾರ್ಮಿಕರಿಗೆ ರ್ಯಾಪಿಡ್ ಆ್ಯಂಟಿಜನ್ ಪರೀಕ್ಷೆ, 3,872 ಜನರ ಗಂಟಲು ದ್ರವಪರೀಕ್ಷೆ ನಡೆಸಲಾಗಿದೆ. ಅವರಲ್ಲಿ 816 ಜನರಿಗೆ ಸೋಂಕಿರುವುದು ದೃಢಪಟ್ಟಿದೆ. 423 ಜನರನ್ನು ಆಸ್ಪತ್ರೆಗೆ, 341 ಜನರನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕಳಹಿಸಲಾಗಿದೆ’ ಎಂದು ಬಿಬಿಎಂಪಿ ವಿವರಿಸಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ, ‘ಮನೆಗೆ ಕಳುಹಿಸಿರುವ ಸೋಂಕಿತ ಪೌರಕಾರ್ಮಿಕರ ಮನೆಯಲ್ಲಿ ಶೌಚಾಲಯ ಸಹಿತ ಪ್ರತ್ಯೇಕ ಕೊಠಡಿ ಇದೆಯೇ ಎಂಬುದರ ಬಗ್ಗೆ ವರದಿ ಸಲ್ಲಿಸಬೇಕು’ ಎಂದು ತಿಳಿಸಿವೆ.
‘ರಾಜ್ಯದ ಎಲ್ಲ ಪೌರಕಾರ್ಮಿಕರಿಗೂ ಕೊರೊನಾ ಪರೀಕ್ಷೆ ನಡೆಸದಿರಲು ಕಾರಣ ಏನು’ ಎಂದು ಪೀಠ ಪ್ರಶ್ನಿಸಿದೆ.