ಬೆಂಗಳೂರು: ‘ಬಸವನಗುಡಿ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿನ ಬೆಂಗಳೂರು ಗಣೇಶ ಉತ್ಸವ ಐದು ದಿನ ಮೀರಿ ನಡೆಯಬಾರದು’ ಎಂದು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ‘ಶಂಕರಪುರಂ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್’ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
‘ಉತ್ಸವಕ್ಕೆ ಅನುಮತಿ ಕೋರಿ ಶ್ರೀ ವಿದ್ಯಾರಣ್ಯ ಯುವಕ ಸಂಘ ಸಲ್ಲಿಸುವ ಮನವಿಯನ್ನು ಬಿಬಿಎಂಪಿ ಕೌನ್ಸಿಲ್ ಕಾನೂನಾತ್ಮಕವಾಗಿ ಪರಿಗಣಿಸಬೇಕು. ಒಂದೊಮ್ಮೆ ಅನುಮತಿ ನೀಡಿದ್ದೇ ಆದಲ್ಲಿ, ಅದು ಐದು ದಿನಗಳಿಗೆ ಮೀರಬಾರದು’ ಎಂದು ಬಿಬಿಎಂಪಿಗೆ ತಾಕೀತು ಮಾಡಿದೆ.
‘ಉತ್ಸವದ ಪೂರಕ ಚಟುವಟಿಕೆಗಳಿಗೆ ನೀಡಲಾಗಿರುವ ಅನುಮತಿ ಇದೇ 30ಕ್ಕೆ ಕೊನೆಗೊಳ್ಳಲಿದ್ದು, ಇದೇ 31ರ ಬೆಳಿಗ್ಗೆ 11 ಗಂಟೆಯೊಳಗೆ ಸ್ಥಳ ತೆರವುಗೊಳಿಸಬೇಕು. ತಪ್ಪಿದಲ್ಲಿ ತೆರವಿಗೆ ಬಿಬಿಎಂಪಿ ಕ್ರಮ ಕೈಗೊಳ್ಳಬೇಕು’ ಎಂದೂ ತಿಳಿಸಿದೆ.