ಬೆಂಗಳೂರು: ‘ನಾಗವಾರ–ಗೊಟ್ಟಿಗೆರೆ ಮೆಟ್ರೊ ಮಾರ್ಗಕ್ಕೆ ಮರಗಳನ್ನು ಕಡಿಯುವ ಮತ್ತು ಸ್ಥಳಾಂತರಿಸುವ ಮೊದಲು ಅಷ್ಟೇ ಸಂಖ್ಯೆಯ ಮರಗಳನ್ನು ಬೇರೆಡೆ ಬೆಳೆಸುವ ಬಗ್ಗೆ ಸಿದ್ಧಪಡಿಸಿರುವ ಯೋಜನೆ ಸಲ್ಲಿಸಬೇಕು’ ಎಂದು ಬಿಎಂಆರ್ಸಿಎಲ್ಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಯೋಜನೆಗಾಗಿ 52 ಮರಗಳನ್ನು ಸ್ಥಳಾಂತರಿಸಲು ಮತ್ತು 39 ಮರಗಳನ್ನು ಕಡಿಯಲು ಅನುಮತಿ ನೀಡಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಅನುಮತಿ ಪಡೆಯದ 28 ಮರಗಳಿಗೆ ಯಾವುದೇ ಹಾನಿ ಆಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿತು.
ಸ್ಥಳಾಂತರಗೊಂಡ ಮರಗಳನ್ನು 36 ತಿಂಗಳು ನಿರ್ವಹಣೆ ಮಾಡಲಾಗುವುದು ಎಂಬ ಬಿಎಂಆರ್ಸಿಎಲ್ ಅಫಿಡವಿಟ್ ಅಂಗೀಕರಿಸಿದ ಪೀಠ, ‘ಅವಧಿ ಮುಗಿದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯ ಎನಿಸಿದರೆ ಇನ್ನಷ್ಟು ದಿನ ನಿರ್ವಹಣೆ ಮಾಡಲು ಪತ್ರ ಬರೆಯಬೇಕು’ ಎಂದು ಪೀಠ ಹೇಳಿತು.
ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ಪರಿಸರವಾದಿ ದತ್ತಾತ್ರಯ ಟಿ. ದೇವರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.