ಬೆಂಗಳೂರು: ‘ನನ್ನ ಮೇಲೆ ನಡೆದ ಅತ್ಯಾಚಾರದಿಂದ ಗರ್ಭವತಿಯಾಗಿದ್ದೇನೆ. ಹೊಟ್ಟೆಯಲ್ಲಿರುವ 21 ವಾರಗಳ ಭ್ರೂಣವನ್ನು ತೆಗೆಸಲು ನನಗೆ ಅನುಮತಿ ನೀಡಬೇಕು’ ಎಂಬ ಯುವತಿಯೊಬ್ಬರ ಮನವಿಗೆ ಹೈಕೋರ್ಟ್ ಸಮ್ಮತಿಸಿದೆ.
‘ಗರ್ಭಪಾತ ನಡೆಸಲು ನಗರದ ವಾಣಿ ವಿಲಾಸ ಆಸ್ಪತ್ರೆ ಹಾಗೂ ಬೆಂಗಳೂರು ವೈದ್ಯಕೀಯ ಮಂಡಳಿಗೆ ನಿರ್ದೇಶಿಸಬೇಕು’ ಎಂದು ಕೋರಿಕೆಯನ್ನು ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.
‘ಅರ್ಜಿದಾರ ಯುವತಿಯನ್ನು ವಾಣಿ ವಿಲಾಸ ಆಸ್ಪತ್ರೆಯಲ್ಲಿ ದಾಖಲಿಸಬೇಕು ಮತ್ತು ಆಕೆಯ ಬೇಡದ ಗರ್ಭಪಾತಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಗರ್ಭಪಾತ ಮಾಡಿದ ಭ್ರೂಣದ ಡಿಎನ್ಎ ಪರೀಕ್ಷೆ ನಡೆಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.
‘ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ₹ 3 ಲಕ್ಷ ಹಾಗೂ ಸಂಬಂಧಪಟ್ಟ ಪೊಲೀಸ್ ಉಪ ಆಯುಕ್ತರು ₹ 75 ಸಾವಿರ ಮೊತ್ತವನ್ನು ಸಂತ್ರಸ್ತೆಗೆ ಪರಿಹಾರ ರೂಪದಲ್ಲಿ ನೀಡಬೇಕು’ ಎಂದೂ ನ್ಯಾಯಪೀಠ ನಿರ್ದೇಶಿಸಿದೆ.