ಬೆಂಗಳೂರು:ಬೆಳ್ಳಂದೂರು ಪ್ರದೇಶದಲ್ಲಿ ವಾಸವಿದ್ದ ವಲಸೆ ಕಾರ್ಮಿಕರ ಗುಡಿಸಿಲುಗಳನ್ನು ನಾಶಪಡಿಸಿದ ಪ್ರಕರಣದಲ್ಲಿ ಸಂತ್ರಸ್ತ 351 ಕುಟುಂಬಗಳ ಪುನರ್ವಸತಿಗೆ ಉತ್ತಮವಾದ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪುನವರ್ಸತಿಗೆ ಜಿಗಣಿ ಬಳಿ ಜಾಗ ಗುರುತಿಸಲಾಗಿದೆ ಎಂದು ಸರ್ಕಾರ ವರದಿ ಸಲ್ಲಿಸಿದೆ. ಆದರೆ, ಗುರುತಿಸಿರುವ ಜಾಗ ವಿವಾದ ರಹಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಲ್ಲ.
‘ಬೆಳ್ಳಂದೂರು ಪ್ರದೇಶದ ಕಾರ್ಮಿಕರನ್ನು ಜಿಗಣಿಗೆ, ಅದರಲ್ಲೂ ಅನಿಶ್ಚಿತವಾದ ಜಾಗಕ್ಕೆ ಸ್ಥಳಾಂತರ ಮಾಡುವುದು ಸರಿಯಲ್ಲ’ ಎಂದು ಅರ್ಜಿದಾರರ(ಪಿಯುಸಿಎಲ್) ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
‘ಗುಡಿಸಿಲುಗಳನ್ನು ನಾಶಪಡಿಸಿ ಏಳು ತಿಂಗಳು ಕಳೆದರೂ ಆರೋಪಿಗಳನ್ನು ಪತ್ತೆ ಮಾಡಿಲ್ಲ. ಅವರನ್ನು ಪತ್ತೆ ಮಾಡುವುದು ರಾಕೆಟ್ ವಿಜ್ಞಾನವೇ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಮೌಖಿಕವಾಗಿ ಪ್ರಶ್ನಿಸಿತು.