ಬೆಂಗಳೂರು: ‘ಉನ್ನತ ಶಿಕ್ಷಣ ಎಂಬುದು ಇತ್ತೀಚಿನ ದಿನಗಳಲ್ಲಿ ಐಷಾರಾಮದ ಚಿಹ್ನೆಯಾಗಿದೆ. ಅದು ಪ್ರತಿವ್ಯಕ್ತಿಯ ವ್ಯಕ್ತಿತ್ವದ ಏಳಿಗೆಗೆ ಅವಶ್ಯಕ. ಸಂಶೋಧನೆಯಿಂದ ಮಾತ್ರ ಜ್ಞಾನಸಂವರ್ಧನೆ ಸಾಧ್ಯ’ ಎಂದು ಕರ್ನೂಲಿನ ಐಐಐಟಿ ಕಾಲೇಜಿನ ಅಧ್ಯಕ್ಷ ಪ್ರೊ.ಎಚ್.ಎ.ರಂಗನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ‘ನೂತನ ಶಿಕ್ಷಕರ ತರಬೇತಿ ಮತ್ತು ದೃಷ್ಟಿಕೋನ’ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತದ ಉನ್ನತ ಶಿಕ್ಷಣ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಹೇಗೆ ಬದಲಾವಣೆ ಕಂಡಿದೆ ಎಂಬುದನ್ನು ಅಂಕಿ-ಅಂಶ ಸಹಿತ ವಿವರಿಸಿದರು. ಹೊಸ ಶಿಕ್ಷಣ ನೀತಿಯನ್ನು ಕುರಿತು ಚರ್ಚಿಸಿದರು.
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ನಿಸಾರ್ ಅಹ್ಮದ್, ಸಂಸ್ಥೆಯ ಉಪಾಧ್ಯಕ್ಷ ಸಲ್ಮಾನ್ ಅಹ್ಮದ್, ಸಹಕುಲಪತಿ ಡಾ.ವಿಜಯನ್ ಇಮ್ಯಾನುಯಲ್, ಕುಲಪತಿ ಡಾ.ಈಶ್ವರ್ ಭಟ್ ಇದ್ದರು.