ಬಳ್ಳಾರಿ: ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನವು ಜಿಲ್ಲೆಯಲ್ಲಿ ಶುಕ್ರವಾರ ಮೋಡ ಮುಸುಕಿದ ವಾತಾವರಣದ ನಡುವೆಯೇ ಭರದಿಂದ ನಡೆಯಿತು. ಶೇ 73.70 ಮತದಾನ ದಾಖಲಾಗಿದೆ.
ದಂಪತಿ, ಅಂಧರು, ಅಂಗವಿಕಲರು, ಶಿಕ್ಷಕರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾವಿರಾರು ಮತದಾರರು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು.
ಜಿಲ್ಲೆಯ ಬಹುತೇಕ ಕಡೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದ ಪರಿಣಾಮವಾಗಿ 10 ಗಂಟೆಯವರೆಗೂ ಮತದಾನದಲ್ಲಿ ಬಿರುಸು ಕಂಡಿರಲಿಲ್ಲ. ಬಿಸಿಲು ಕಾಣಿಸಿಕೊಂಡ ಬಳಿಕ ಮತದಾರರು ಮತಗಟ್ಟೆಗಳತ್ತ ಸಾಗಿ ಬಂದರು.
ಬೆಳಿಗ್ಗೆಯಿಂದಲೇ ಮತಗಟ್ಟೆ ಸಮೀಪದಲ್ಲಿ ಮತದಾರರಾಗಿ ಕಾಯುತ್ತಿದ್ದ ಅಭ್ಯರ್ಥಿಗಳ ಏಜೆಂಟರು, ಮತದಾರರ ಪಟ್ಟಿಯ ಸಂಖ್ಯೆಯನ್ನು ಗುರುತಿಸಿ, ಚೀಟಿ ಕೊಟ್ಟು ಕಳಿಸುತ್ತಿದ್ದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮತಗಟ್ಟೆಗೆ ಮಧ್ಯಾಹ್ನದ ವೇಳೆಗೆ ಭೇಟಿ ನೀಡಿದ ಸಹಾಯಕ ಚುನಾವಣಾಧಿಕಾರಿಯೂ ಆಗದ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್ ಮನೋಹರ್, ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಅಂಧ ಪದವೀಧರರ ಉತ್ಸಾಹ: ಸಿರಿವಾರ ಕ್ರಾಸ್ನಲ್ಲಿ ಪೆಟ್ರೋಲ್ಬಂಕ್ ನಡೆಸುವ ಎಂ.ಎ.ಪದವೀಧರರಾದ ಚೇತನ್ ತಮ್ಮ ತಾಯಿಯೊಂದಿಗೆ ಮೋಕಾ ಗ್ರಾಮದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
ಜೂನ್ 12ರಂದು ಮತ ಎಣಿಕೆ
ಬಳ್ಳಾರಿ: ಜೂನ್ 12ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದಲ್ಲಿ ಮತ ಎಣಿಕೆ ನಡೆಯಲಿದ್ದು, ಜಿಲ್ಲೆಯ ಎಬ್ಬರು ಪ್ರಮುಖ ಅಭ್ಯರ್ಥಿಗಳ ಭವಿಷ್ಯವೂ ಅಂದು ನಿರ್ಧಾರವಾಗಲಿದೆ. ಎನ್.ಪ್ರತಾಪ್ರೆಡ್ಡಿ ಜೆಡಿಎಸ್ನಿಂದ ಮತ್ತು ಕೆ.ಬಿ.ಶ್ರೀನಿವಾಸ್ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಇದೇ ಮೊದಲ ಬಾರಿಗೆ ಎರಡೂ ಪಕ್ಷಗಳು ಜಿಲ್ಲೆಗೆ ಪ್ರಾತಿನಿಧ್ಯ ನೀಡಿರುವುದು ವಿಶೇಷ.