ಬೆಂಗಳೂರು: ಮನೆಯಲ್ಲಿ ಕಳವು ಹಾಗೂ ವಾಹನ ಕಳವು ಮಾಡುತ್ತಿದ್ದ ಆರೋಪಿ ಖಲೀಲ್ ಖಾನ್ (42) ಎಂಬಾತನನ್ನು ಆತನ ಬೆರಳಚ್ಚಿನಿಂದಲೇ ಪೊಲೀಸರು ಸೆರೆ ಹಿಡಿದಿದ್ದಾರೆ.
‘ಬನಶಂಕರಿ ಮಾರುತಿ ಲೇಔಟ್ನ ಖಲೀಲ್, ಅಪರಾಧ ಹಿನ್ನೆಲೆಯುಳ್ಳವ. ಆತನಿಂದ ₹ 19.65 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಹೇಳಿದರು.
‘ಬನಶಂಕರಿ ಎರಡನೇ ಹಂತದ ನಿವಾಸಿ ಸಿ.ಶೇಖರ್ ಎಂಬುವರ ಮನೆಯಲ್ಲಿ ಜುಲೈ 6ರಂದು ಕಳವು ಆಗಿತ್ತು. ಮನೆಗೆ ಭೇಟಿ ನೀಡಿದ್ದ ಬೆರಳಚ್ಚು ತಂಡ, ಘಟನಾ ಸ್ಥಳದಲ್ಲಿದ್ದ ಬೆರಳಚ್ಚುಗಳನ್ನು ಸಂಗ್ರಹಿಸಿತ್ತು. ಅದರ ಮೂಲಕವೇ ಆರೋಪಿ ಸೆರೆಸಿಕ್ಕ’ ಎಂದೂ ಹೇಳಿದರು.
‘ಆರೋಪಿ ಖಲೀಲ್, ಈ ಹಿಂದೆಯೂ ಅಪರಾಧ ಎಸಗಿದ್ದ. ಆತನನ್ನು ಬಂಧಿಸಿದ್ದ ಪೊಲೀಸರು, ಬೆರಳಚ್ಚು ಹಾಗೂ ಫೋಟೊವನ್ನು ತೆಗೆದಿದ್ದರು. ಅಪರಾಧ ದಾಖಲಾತಿ ಘಟಕದಲ್ಲಿ ಅಪ್ಲೋಡ್ ಮಾಡಿದ್ದರು. ಅದುವೇ ಆರೋಪಿ ಬಂಧಿಸಲು ನೆರವಾಯಿತು’ ಎಂದೂ ತಿಳಿಸಿದರು.