ಬೆಂಗಳೂರು: ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಇಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಗಂಗೊಂಡನಹಳ್ಳಿ ನಿವಾಸಿ ಚಾಂದ್ ಪಾಷಾ (46) ಹಾಗೂ ಮೊಹಮ್ಮದ್ ಆರೀಫ್ (24) ಬಂಧಿತರು. ಅವರಿಬ್ಬರಿಂದ ₹ 11.21 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೆಂಗೇರಿ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು, ಫೆ. 2ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಬೇರೆ ಊರಿಗೆ ಹೋಗಿದ್ದರು. ಫೆ. 4ರಂದು ಊರಿನಿಂದ ವಾಪಸು ಬಂದು ನೋಡಿದಾಗಲೇ, ಮನೆಯಲ್ಲೇ ಕಳ್ಳತನ ನಡೆದಿದ್ದು ಗಮನಕ್ಕೆ ಬಂದಿತ್ತು.’
‘ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗುರುತಿಸಿದ್ದ ಆರೋಪಿಗಳು, ಹಿಂಬಾಗಿಲು ಮೀಟಿ ಒಳಗೆ ನುಗ್ಗಿದ್ದರು. ಮನೆಯಲ್ಲೆಲ್ಲ ಹುಡುಕಾಡಿ, ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕದ್ದುಕೊಂಡು ಹೋಗಿದ್ದರು’ ಎಂದೂ ತಿಳಿಸಿದರು.
‘ಆರೋಪಿಗಳು ನಾಲ್ಕು ಕಡೆಗಳಲ್ಲಿ ಕಳ್ಳತನ ಮಾಡಿರುವುದು ಗೊತ್ತಾಗಿದೆ’ ಎಂದೂ ಪೊಲೀಸರು ಹೇಳಿದರು.