ಬೆಂಗಳೂರು: ‘ವಿವಿಧ ಕಾಯಿಲೆಗಳನ್ನುಎದುರಿಸಲು ಬೇಕಾದ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಹೋಮಿಯೋ ಪಥಿ ವಿಧಾನವು ಸಹಕಾರಿಯಾಗಿದೆ. ಹೀಗಾಗಿಯೇ ಈ ಪದ್ಧತಿಯು ಜಗತ್ತಿನಾದ್ಯಂತ ಅತ್ಯಂತ ವೇಗವಾಗಿ ಜನಪ್ರಿಯ ವಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನಗರದ ಕೆ.ಎಚ್.ಬಿ ಕಾಲೊನಿಯಲ್ಲಿ ಕರ್ನಾಟಕ ಹೋಮಿಯೋಪಥಿ ಮಂಡಳಿಯು ನಿರ್ಮಿಸಿರುವ ನೂತನ ಆಡಳಿತ ಕಚೇರಿ ‘ಹೋಮಿಯೋ ಭವನ’ವನ್ನು ಶುಕ್ರವಾರ ಉದ್ಘಾಟಿಸಿ, ಮಾತನಾಡಿದರು. ‘ಕಡಿಮೆ ಖರ್ಚಿನ ಹೋಮಿಯೋಪಥಿ ಔಷಧವು ಅತ್ಯಂತ ಪರಿಣಾಮಕಾರಿಯಾಗಿದ್ದು, ಹೆಚ್ಚಿನ ಜನ ಈ ಚಿಕಿತ್ಸಾ ವಿಧಾನವನ್ನು ಬಳಸುತ್ತಿದ್ದಾರೆ’ ಎಂದರು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಹೋಮಿಯೋಪಥಿ ವೈದ್ಯ ಪದ್ಧತಿಯಲ್ಲಿ ಇನ್ನಷ್ಟು ಸಂಶೋಧನೆ ಹಾಗೂ ಅಧ್ಯಯನಗಳನ್ನು ನಡೆಸಿ, ವೈಜ್ಞಾನಿಕವಾಗಿ ದಾಖಲಿಸಬೇಕು‘ ಎಂದರು.