ಅಕ್ಕ ಮಹಾದೇವಿ ಪ್ರಸ್ತಾಪ ಮಾಡಿರುವ ಕದಳಿ ವನ, ಶರಣರು ಮೇಳೈಸುತ್ತಿದ್ದ ಕಲ್ಯಾಣ, ವೈಷ್ಣವ ಮಾರ್ಗದ ಶ್ರೀಕೃಷ್ಣನ ಬೃಂದಾವನಗಳಿಗೆ ಭೌತಿಕ ಲೇಪನ ಹಚ್ಚುವುದು, ಅವು ಇಂತಹ ಸ್ಥಳಗಳು ಎಂದು ನಂಬಿಕೊಳ್ಳುವುದು ಭಕ್ತಿ ಮಾರ್ಗದ ತಿಳಿವಳಿಕೆಯ ಅರಿವಿಗೆ ತೊಡಕಾಗುತ್ತದೆ. ಅಕ್ಕನ ಕದಳಿ ತೋಟ ಶ್ರೀಗಿರಿಯ ತುತ್ತತುದಿ. ಅದು ತಾನು ನಂಬಿದ ಚನ್ನಮಲ್ಲಿಕಾರ್ಜುನ ದೇವನ ಭಕ್ತಿಯ ಪರಾಕಾಷ್ಠೆಯ ಸಂಕೇತ. ಅಧ್ಯಾತ್ಮವನ್ನು ಭೌತಿಕ ನೆಲೆಗಟ್ಟಿನಲ್ಲಿ ಅರ್ಥೈಸಲು ಸಾಧ್ಯವೇ ಇಲ್ಲ. ಅಕ್ಕನ ಕದಳಿ ಆಂಧ್ರ ಪ್ರದೇಶದಲ್ಲಿದೆ, ಬಿಜ್ಜಳ ಕಲ್ಯಾಣಕ್ಕೆ ಭೇಟಿ ಕೊಟ್ಟಿದ್ದ ಎನ್ನುವ ಅಂಶಗಳಿಗೆ ಐತಿಹಾಸಿಕ ಪುರಾವೆಗಳಿಲ್ಲ ಎಂದರು.