ಬೆಂಗಳೂರು: ‘ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಯಾರೂ ಸರಿ ಇಲ್ಲ ಅನಿಸಿದರೆ ನೋಟಾ ಚಲಾಯಿಸಿ. ಇಲ್ಲದಿದ್ದರೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲೇ ಉತ್ತಮರನ್ನು ಆಯ್ಕೆ ಮಾಡಿ’ ಎಂದು ವಿಧಾನಸಭಾಧ್ಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.
ಬೆಂಗಳೂರು ನಗರ ಜಿಲ್ಲಾಡಳಿತ ವತಿಯಿಂದ ಬುಧವಾರ ಆಯೋಜಿಸಿದ್ದ ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ‘ಮತದಾನಕ್ಕೆ ಜಾತಿ, ಉಪಜಾತಿ, ಹಣ, ಹೆಂಡ, ತೋಳ್ಬಲವೇ ಮಾನದಂಡವಾಗಿರುವ ಈ ಸನ್ನಿವೇಶದಲ್ಲಿ ಯುವಕರಿಂದ ಮಾತ್ರ ಪರಿವರ್ತನೆ ಸಾಧ್ಯ’ ಎಂದರು.
‘ರಾಜಕಾರಣಿಗಳು ಹಣ ಕೊಡಬಾರದು. ಮತದಾರರು ಹಣ ತೆಗೆದುಕೊಳ್ಳಬಾರದು. ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ವಿಷವರ್ತುಲದಲ್ಲಿ ಸಿಲುಕಿದ್ದೇವೆ. ದೇವಸ್ಥಾನ, ಮಸೀದಿ, ಚರ್ಚ್ಗೆ ಹೋದರೂ ಹಣ ಕೇಳುತ್ತಾರೆ. ಮೂಲಸೌಕರ್ಯಗಳ ಬಗ್ಗೆ ಪ್ರಶ್ನೆ ಕೇಳುವ ಬದಲು ಹಬ್ಬ, ಕ್ರೀಡಾಕೂಟಗಳ ಹೆಸರಿನಲ್ಲಿ ರಾಜಕಾರಣಿಗಳಿಂದ ಹಣ ಕೇಳುತ್ತಾರೆ. ರಾಜಕಾರಣಿಗಳು ಎಲ್ಲಿಂದ ಹಣ ತರಬೇಕು? ಇಂತಹ ವಿಷವರ್ತುಲ ದಿಂದ ಹೊರಬರದಿದ್ದರೆ ಪರಿಸ್ಥಿತಿ ಸುಧಾರಿಸುವುದಿಲ್ಲ’ ಎಂದರು.
‘ಕೇವಲ ಅಧಿಕಾರ ಮತ್ತು ಹಣ ಸಂಪಾದಿಸಲು ರಾಜಕೀಯ ಪ್ರವೇಶಸುತ್ತಿರುವವರೇ ಹೆಚ್ಚಾಗಿದ್ದಾರೆ ಎನ್ನುವ ಎಸ್ಜಿಆರ್ ಕಾಲೇಜಿನ ವೆಂಕಟಚಲಪತಿ ಪ್ರಶ್ನೆಗೆ ಉತ್ತರಿಸಿದ ಅವರು, ‘ನೀವೆಲ್ಲ (ಯುವಕರು) ರಾಜಕೀಯಕ್ಕೆ ಬನ್ನಿ. ಒಳ್ಳೆಯವರು ರಾಜಕೀಯಕ್ಕೆ ಬಂದರೆ ಪರಿಸ್ಥಿತಿ ಬದಲಾಗಬಹುದು’ ಎಂದರು.