ಬೆಂಗಳೂರು: ‘ಸ್ವೀಪ್ ಚಟುವಟಿಕೆಯಲ್ಲಿ 2018ರಿಂದ ಮತದಾರರ ಪರಿಷ್ಕರಣೆ ಸಂದರ್ಭದಲ್ಲಿ ಚಿಲುಮೆ ಸಂಸ್ಥೆಗೆ ಅವಕಾಶ ನೀಡಲಾಗುತ್ತಿದೆ. ಅವರು ಮತಗಟ್ಟೆ ಅಧಿಕಾರಿ ಎಂದು ಗುರುತಿನ ಚೀಟಿ ಪಡೆದಿರುವುದು ತಪ್ಪು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
‘ಅಕ್ರಮವಾಗಿ ಗುರುತಿನ ಚೀಟಿ ಪಡೆದವರು ಹಾಗೂ ಗುರುತಿನ ಚೀಟಿ ನೀಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ಎಲ್ಲ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಅವರ ವರದಿ ಬಂದ ಮೇಲೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಕಡಿಮೆ ಪ್ರಮಾಣದಲ್ಲಿ ಇದ್ದುದರಿಂದ ಅರಿವು ಜೊತೆಗೆ ಅದನ್ನು ನಿರ್ವಹಿಸುತ್ತಿದ್ದರು. ಅವರು ಖಾಸಗಿಯಾಗಿ ಮಾಹಿತಿ ಪಡೆದಿರುವ ಬಗ್ಗೆ ಮಾಹಿತಿ ಇಲ್ಲ. ತನಿಖೆಯಿಂದ ಹೊರಬರುತ್ತದೆ. ಚಿಲುಮೆ ಸಂಸ್ಥೆಯೊಂದಕ್ಕೆ ಮಾತ್ರ ಅರಿವು ಮೂಡಿಸುವ ಅನುಮತಿ ನೀಡಲಾಗಿತ್ತು’ ಎಂದರು.