ಬೆಂಗಳೂರು: ತ್ರಿಪುರ ಹಾಗೂ ಬಿಹಾರದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
‘ಎಚ್ಆರ್ಬಿಆರ್ ಬಡಾವಣೆಯ 1ನೇ ಹಂತದ ಬಾಬುಸಾಪಾಳ್ಯ ಜಂಕ್ಷನ್ ಬಳಿ ಗಾಂಜಾ ಮಾರಲು ಆರೋಪಿಗಳು ಬಂದಿದ್ದರು. ಎರಡು ಬ್ಯಾಗ್ಗಳಲ್ಲಿ ಗಾಂಜಾ ಪೊಟ್ಟಣಗಳನ್ನು ತುಂಬಿಕೊಂಡು ತಂದಿದ್ದರು. ಅವರ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಬಂಧಿಸಲಾಯಿತು. ₹ 6.50 ಲಕ್ಷ ಮೌಲ್ಯದ 21 ಕೆ.ಜಿ 500 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿಯೊಬ್ಬ ತ್ರಿಪುರಾ ರಾಜ್ಯದವ. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ಇನ್ನೊಬ್ಬ ಆರೋಪಿ ಪರಿಚಯವಾಗಿತ್ತು. ಇಬ್ಬರೂ ಸೇರಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದರು. ತ್ರಿಪುರ ಹಾಗೂ ಬಿಹಾರದ ಕೆಲವರ ಜೊತೆ ಒಡನಾಟ ಹೊಂದಿದ್ದ ಆರೋಪಿಗಳು, ಅವರ ಮೂಲಕ ಗಾಂಜಾ ಖರೀದಿಸಿ ನಗರಕ್ಕೆ ತರುತ್ತಿದ್ದರು. ಕೆಲ ಕಾಲೇಜು ವಿದ್ಯಾರ್ಥಿಗಳು, ಖಾಸಗಿ ಕಂಪನಿಗಳಕೆಲ ಉದ್ಯೋಗಿಗಳು ಹಾಗೂ ಕಾರ್ಮಿಕರಿಗೆ ಮಾದಕ ದ್ರವ್ಯ ಮಾರುತ್ತಿದ್ದರು.’
‘ಗಾಂಜಾ ಮಾರಾಟದಿಂದ ಬಂದ ಹಣವನ್ನು ಆರೋಪಿಗಳು ಹಂಚಿಕೊಳ್ಳುತ್ತಿದ್ದರು. ಇವರ ಜೊತೆ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಮಾಹಿತಿ ಇದೆ’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.