ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಲಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (ಎಚ್ಆರ್ಡಬ್ಲ್ಯುಎ) ಹಾಗೂ ಎ ಆಂಡ್ ಎ ಫೌಂಡೇಷನ್ ಸಹಯೋಗದಲ್ಲಿ ಪೌರಕರ್ಮಿಕರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ 'ಎನ್ಲೈಟ್ಲೈಫ್ ಇಮ್ಯುನಿಟಿ ಬೂಸ್ಟರ್ ಕಿಟ್' ವಿತರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಎಚ್ಆರ್ಡಬ್ಲ್ಯುಎ ಅಧ್ಯಕ್ಷ ಮಹೇಂದ್ರ ಜೈನ್, 'ಪೌರಕಾರ್ಮಿಕರಿಗೆ ಒಂದು ವರ್ಷ ಉಚಿತ ವೈದ್ಯಕೀಯ ಸಮಾಲೋಚನೆ, ರಕ್ತ ಪರೀಕ್ಷೆಗಳು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಇಮ್ಯುನಿಟಿ ಬೂಸ್ಟರ್ ವಿತರಿಸಲಾಗುವುದು. ಕೊರೊನಾದಂತಹ ಸೋಂಕಿನಿಂದ ರಕ್ಷಣೆ ಪಡೆಯಲು ಇದು ನೆರವಾಗಲಿದೆ' ಎಂದರು.
ಎನ್ಲೈಟ್ಲೈಫ್ ಸಂಸ್ಥೆಯ ಆಹಾರ ವಿಜ್ಞಾನಿ ಡಾ.ಗೋವರ್ಧನ್,'ಪೌರಕಾರ್ಮಿಕರು ಸೋಂಕಿನಿಂದ ಪಾರಾಗಲು ಕಸ ವಿಲೇ ಮಾಡುವಾಗ ಪಾದರಕ್ಷೆ ಅಥವಾ ಬೂಟ್ಗಳನ್ನು ಧರಿಸುವುದು ಅಗತ್ಯ. ಬಟ್ಟೆಗಳನ್ನು ಚೆನ್ನಾಗಿ ತೊಳೆಯಿರಿ. ಪ್ರತಿದಿನ 3 ಲೀ ನೀರು ಕುಡಿಯಬೇಕು’ ಎಂದು ಸಲಹೆ ನೀಡಿದರು.
ಎಚ್ಆರ್ ಡಬ್ಲ್ಯುಎ ಉಪಾಧ್ಯಕ್ಷ ಮೋಹನ್ಕುಮಾರ್, ಪಾಲಿಕೆ ಸದಸ್ಯೆ ಮಮತಾ ಸರವಣ ಇದ್ದರು.