ಬೆಂಗಳೂರು: ಒಳನಾಡು ಮೀನು ಉತ್ಪಾದಕರ ಸಮಾವೇಶ ಇದೇ 16 ರಂದು ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ.
ಫ್ರೀಡಂ ಆ್ಯಪ್ ಸಹಯೋಗದಲ್ಲಿ ಈ ಸಮಾವೇಶ ಆಯೋಜಿಸಲಾಗಿದ್ದು,ಸುಮಾರು 8 ಸಾವಿರದಿಂದ 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಜ್ಞರು ರೈತರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫ್ರೀಡಂ ಆ್ಯಪ್ ಸಂಸ್ಥಾಪಕ ಮತ್ತು ಸಿಇಒ ಸಿ.ಎಸ್. ಸುಧೀರ್ ಮಾತನಾಡಿ, ‘ಪ್ರತಿಯೊಬ್ಬ ರೈತ ಮೀನು ಸಾಕಾಣಿಕೆಯಲ್ಲಿ ತೊಡಗಬೇಕು. ಇದರಿಂದ ಅವರ ಆದಾಯ ಹೆಚ್ಚಾಗಬೇಕು ಎನ್ನುವುದು ಸಮಾವೇಶದ ಆಶಯ’ ಎಂದು ಹೇಳಿದರು.
‘ಸಮಾವೇಶದಲ್ಲಿ ಮೀನಿನ ತಳಿಗಳು, ಆಧುನಿಕ ತಂತ್ರಜ್ಞಾನಗಳು ಮತ್ತು ಮೌಲ್ಯವರ್ಧನೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಮಾರಾಟ ಕುರಿತು ಸಮಾವೇಶದಲ್ಲಿ ರೈತರಿಗೆ ಮಾರ್ಗದರ್ಶನ ದೊರೆಯಲಿದೆ. ಜತೆಗೆ ಹತ್ತು ಸಾಧಕ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು.
‘ಸಮಾವೇಶದಲ್ಲಿ ಭಾಗವಹಿಸಲು ಫ್ರೀಡಂ ಆ್ಯಪ್ನಲ್ಲಿ ಅಗತ್ಯ ಮಾಹಿತಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಅನುಮೋದನೆಗೊಂಡ ನಂತರ ವಾಟ್ಸ್ಆ್ಯಪ್ ಮೂಲಕ ಅಧಿಕೃತ ಪ್ರವೇಶದ ಪಾಸ್ ಅನ್ನು ಕಳುಹಿಸಲಾಗುತ್ತದೆ’ ಎಂದು ವಿವರಿಸಿದರು.
16ರಂದು ಬೆಳಿಗ್ಗೆ 9ಕ್ಕೆಸಮಾವೇಶಕ್ಕೆ ಚಾಲನೆ ದೊರೆಯಲಿದ್ದು, ಕೇಂದ್ರದ ಮೀನುಗಾರಿಕೆ ಖಾತೆ ರಾಜ್ಯ ಸಚಿವ ಎಲ್. ಮುರುಗನ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ.