ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2‘ಎ’ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನಾ ಸ್ಥಳದಲ್ಲೇ ಶಿವರಾತ್ರಿ ಅಂಗವಾಗಿ ಶನಿವಾರ ಮಧ್ಯರಾತ್ರಿ ತನಕ ಇಷ್ಟಲಿಂಗ ಪೂಜೆ ನೆರವೇರಿತು.
ಬಳಿಕ ಮಾತನಾಡಿದ ಸ್ವಾಮೀಜಿ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಯಿ ಮೇಲೆ ಆಣೆ ಮಾಡಿ ಸಮಾಜಕ್ಕೆ ಮೋಸ ಮಾಡಿದ್ದಾರೆ. ಇನ್ನಾದರೂ ಅವರ ಮನಸ್ಸು ಪರಿವರ್ತನೆಗೊಂಡು ಮೀಸಲಾತಿ ಕಲ್ಪಿಸುವಂತೆ ಆಗಲಿ’ ಎಂದು ಹೇಳಿದರು.
ಚಿತ್ರದುರ್ಗದ ತೋಟಪ್ಪ ಉತ್ತಂಗಿ ವಚನಗಾಯನ ಕಾರ್ಯಕ್ರಮ ನೀಡಿದರು. ಡಾ.ಬಿ.ಎಸ್. ಪಾಟೀಲ ನಾಗಲ್ಹುಲಿ, ಶಿವಪುತ್ರಪ್ಪ ಮಲ್ಲೇವಾಡ, ಪುಟ್ಟರಾಜ, ಶಿವಕುಮಾರ್ ಮೇಟಿ, ದೀಪಕ್ ಜುಂಜರವಾಡ, ಕಾಂತೇಶ್, ಶೈಲೇಂದ್ರ ಪಾಟೀಲ್, ಮಲ್ಲನಗೌಡ , ದೇವೇಂದ್ರಪ್ಪ ತೋಟದ ಇದ್ದರು.