ಬೆಂಗಳೂರು: ನೀರು ಸರಬರಾಜು ಮತ್ತು ಒಳಚರಂಡಿ ಸಮಸ್ಯೆಗಳಿಗೆ ಸ್ಪಂದಿಸಲು ಜಲಮಂಡಳಿಯು ತನ್ನ 15 ಕಚೇರಿಗಳಲ್ಲಿ ಶನಿವಾರ ‘ಜಲಸ್ಪಂದನ’ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ನೀರು ಸರಬರಾಜು ಮತ್ತು ಒಳಚರಂಡಿ ಸಮಸ್ಯೆ ಅಲ್ಲದೆ, ಹೊಸದಾಗಿ ಕೊಳವೆ ಅಳವಡಿಸುವ ಕುರಿತು ಮತ್ತು ಇತರೆ ವಿಷಯ ಸೇರಿ ಒಟ್ಟು 176 ದೂರುಗಳು ಸಲ್ಲಿಕೆಯಾದವು. ಮಂಡಳಿಯ ಅಧ್ಯಕ್ಷ ತುಷಾರ್ ಗಿರಿನಾಥ್, ಮಹದೇವಪುರ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ಥಳೀಯರ ಅಹವಾಲು ಆಲಿಸಿದರು.
ಸ್ಥಳೀಯರಿಂದ ದೂರನ್ನು ಸ್ವೀಕರಿಸಿ, ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ತುರ್ತಾಗಿ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ಮತ್ತು ಇತರೆ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪ್ರತಿ ಎರಡನೇ ಶನಿವಾರ ಈ ಎಲ್ಲ 15 ಸ್ಥಳಗಳಲ್ಲಿ ಜಲಸ್ಪಂದನ ನಡೆಯುತ್ತದೆ.