ಯಲಹಂಕ: ಜಕ್ಕೂರು ವಾರ್ಡ್ ವ್ಯಾಪ್ತಿಯ ಅಗ್ರಹಾರ ಬಡಾವಣೆ ಮತ್ತು ಕೋಗಿಲು ಬಡಾವಣೆ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ.
ಈ ಬಡಾವಣೆಗಳಿಗೆ ಕಾವೇರಿ ನೀರು ಸರಬರಾಜು ಮಾಡಲು ಜಲ ಮಂಡಳಿಯು ಕೊಳವೆಮಾರ್ಗಗಳನ್ನು ಅಳವಡಿಸಿ ಎರಡು ವರ್ಷಗಳು ಕಳೆದಿದ್ದು, ಇದುವರೆಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಜನರು ಕೊಳವೆಬಾವಿ ನೀರನ್ನೇ ಅವಲಂಬಿಸಿದ್ದಾರೆ.
‘10 ದಿನಗಳಿಗೊಮ್ಮೆ ನೀರು ಬಿಡುತ್ತಾರೆ. ಒಂದು ಟ್ಯಾಂಕರ್ ನೀರಿಗೆ ₹420 ನೀಡಿ ಕೊಂಡುಕೊಳ್ಳಬೇಕಾಗಿದೆ. ಸಾಕಾಗದಿದ್ದರೆ ಕೊಳವೆಬಾವಿ ಇರುವ ಮನೆಗಳಿಗೆ ಹೋಗಿ ₹10ಕ್ಕೆ ನಾಲ್ಕೈದು ಬಿಂದಿಗೆ ನೀರನ್ನು ಕೊಂಡುಕೊಳ್ಳಬೇಕಾದ ಪರಿಸ್ಥಿತಿಯಿದೆ’ ಎಂದು ಕೋಗಿಲು ಬಡಾವಣೆ ಬಂಡೆರಸ್ತೆಯ ನಿವಾಸಿ ಮುಮ್ತಾಜ್ ಅಳಲು ತೋಡಿಕೊಂಡರು.
‘ಅಗ್ರಹಾರ ಬಡಾವಣೆಯಲ್ಲಿ ನಾಲ್ಕು ತಿಂಗಳಲ್ಲಿ 17 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇನ್ನೂ 60-70 ಕೊಳವೆಬಾವಿಗಳು ಮಂಜೂರಾಗುವ ಹಂತದಲ್ಲಿದ್ದು, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ’ಎಂದು ಬಿಬಿಎಂಪಿ ಸದಸ್ಯ ಕೆ.ಎ.ಮುನೀಂದ್ರ ಕುಮಾರ್ ತಿಳಿಸಿದರು.