ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರ ಸಂಸದ್ ಉದ್ಯೋಗ ಮಿತ್ರ ಹಾಗೂ ನವ ಬೆಂಗಳೂರು ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಬಿಟಿಎಂ ಬಡಾವಣೆಯ ಶಾಂತಿನಿಕೇತನ ಶಾಲೆಯ ಆವರಣದಲ್ಲಿ ‘ಬೃಹತ್ ಉದ್ಯೋಗ ಮೇಳ’ವನ್ನು ಭಾನುವಾರ ಆಯೋಜಿಸಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ನವ ಬೆಂಗಳೂರು ಪ್ರತಿಷ್ಠಾನದ ಮುಖ್ಯಸ್ಥ ಅನಿಲ್ ಶೆಟ್ಟಿ, ಮುಖಂಡರಾದ ಗೋಪಿನಾಥ್ ರೆಡ್ಡಿ, ಪ್ರಕ್ಟೋ ಸಂಸ್ಥೆಯ ಮುಖ್ಯಸ್ಥ ಶಶಾಂಕ್, ರಿಚರ್ಡ್ ಪಟ್ಟಲೆ ಹಾಗೂ ‘ಕು ಆ್ಯಪ್’ನ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಭಾಗವಹಿಸಿದ್ದರು.
‘ಮೇಳದಲ್ಲಿ 70ಕ್ಕೂ ಹೆಚ್ಚು ವಿವಿಧ ಕಂಪನಿಗಳು ಭಾಗವಹಿಸಿದ್ದವು. ಉದ್ಯೋಗ ಮೇಳಕ್ಕೆ 1,500ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 250 ಮಂದಿ ಸ್ಥಳದಲ್ಲೇ ವಿವಿಧ ಉದ್ಯೋಗಗಳಿಗೆ ಆಯ್ಕೆಯಾದರು. 750 ಮಂದಿ ಅಭ್ಯರ್ಥಿಗಳನ್ನು ಎರಡನೇ ಹಂತದ ಸಂದರ್ಶನಕ್ಕೆ ಕರೆಯಲಾಗಿದೆ’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.